ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಸ್ವಜನಪಕ್ಷಪಾತ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ವಿರುದ್ಧ ಅಮೃತ ಫಡ್ನವೀಸ್ ಅವರು ಶನಿವಾರ ಕಿಡಿಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದಿಗ್ವಿಜಯ್ ಸಿಂಗ್ ಅವರು ಇದೀಗ ತಮ್ಮ ರಾಜಕೀಯ ಗುರಿಗೆ ಮಹಿಳೆಯರ ಹೆಗಲನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನಂತಹ ಉದ್ಯೋಗಸ್ಥ ಮಹಿಳೆಯರಿಗೆ ಇದೊಂದು ಅವಮಾನ ಮಾಡಿದಂತೆ. ಬ್ಯಾಂಕಿನಲ್ಲಿ ಕೆಳಸ್ತರದಲ್ಲಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ನನ್ನದೇನು ಪಾತ್ರವಿರುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ದಿಗ್ವಿಜಯ್ ಸಿಂಗ್ ಅವರು ಟ್ವೀಟ್ ಒಂದನ್ನು ಮಾಡಿ ಫಢ್ನವೀಸ್ ವಿರುದ್ಧ ಆರೋಪವನ್ನುಮಾಡಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ನೇತೃತ್ವದ ಎಸ್ಆರ್ ಎ (ಕೊಳಚೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ) ಡೆವಲಪರ್ಸ್ ಖಾತೆಗಳನ್ನು ವರ್ಲಿಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ನಲ್ಲೇ ತೆರೆಯುವಂತೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಫಡ್ನವೀಸ್ ಪತ್ನಿ ಅಮೃತ ಫಡ್ನವೀಸ್ ಅವರು ಆ್ಯಕ್ಸಿಸ್ ಬ್ಯಾಂಕ್ ನ ಉಪಾಧ್ಯಕ್ಷರಾಗಿರುವುದು. ಇದಕ್ಕಿಂತ ಸ್ವಜನಪಕ್ಷಪಾತ ಧೋರಣೆ ಮತ್ತೊಂದಿದೆಯಾ ಎಂದು ಹೇಳಿದ್ದರು.
ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆ ಕಿಡಿಕಾರಿದ್ದ ಫಡ್ನವೀಸ್ ಅವರು ಕ್ಷಮೆಯಾಚಿಸುವಂತೆ ಕಾನೂನಾತ್ಮಕವಾಗಿ ನೋಟಿಸ್ ವೊಂದನ್ನು ಜಾರಿ ಮಾಡಿದ್ದರು. ಕ್ಷಮೆಯಾಚಿಸದಿದ್ದ ಪಕ್ಷದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದ್ದರು.
Advertisement