ಬ್ರಿಟೀಷ್ ಪೌರತ್ವಕ್ಕೆ ಪ್ರಯತ್ನಿಸಿಯೇ ಇಲ್ಲ: ರಾಹುಲ್ ಗಾಂಧಿ ಸ್ಪಷ್ಟನೆ

ದ್ವಿಪೌರತ್ವವನ್ನು ಎಂದಿಗೂ ಪಡೆದಿಲ್ಲ. ಬ್ರಿಟೀಷ್ ಪೌರತ್ವಕ್ಕೆ ಪ್ರಯತ್ನಿಸಿಯೇ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿಕೊಂಡಿದ್ದಾರೆ....
ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ತೇಜ್ಪುರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ತೇಜ್ಪುರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on

ನವದೆಹಲಿ: ದ್ವಿಪೌರತ್ವವನ್ನು ಎಂದಿಗೂ ಪಡೆದಿಲ್ಲ. ಬ್ರಿಟೀಷ್ ಪೌರತ್ವಕ್ಕೆ ಪ್ರಯತ್ನಿಸಿಯೇ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿಕೊಂಡಿದ್ದಾರೆ.

ತಮ್ಮ ವಿರುದ್ಧ ಕೇಳಿಬಂದಿರುವ ದ್ವಿಪೌರತ್ವ ಆರೋಪಗಳ ಸಂಬಂಧ ಸ್ಪಷ್ಟನೆ ನೀಡಿರುವ ಅವರು, ನಾನು ಎಂದಿಗೂ ದ್ವಿಪೌರತ್ವ ಪಡೆದಿಲ್ಲ. ಸರಿಯಾಗಿ ದಾಖಲೆ ಹಾಗೂ ಸಾಕ್ಷ್ಯಾಧಾರಗಳಿಲ್ಲದೆ ನನ್ನ ವಿರುದ್ಧ ದೂರು ದಾಖಲಿಸಲಾಗಿದೆ. ಇಂತಹ ದೂರನ್ನು ನೀತಿ ಸಮಿತಿ ಸ್ವೀಕರಿಸಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ನಾನು ಎಂದಿಗೂ ಬ್ರಿಟೀಷ್ ಪೌರತ್ವಕ್ಕೆ ಪ್ರಯತ್ನಿಸಿಯೇ ಇಲ್ಲ. ನನ್ನ ಗುರ್ತಿಕೆ ಇರುವುದು ಭಾರತೀಯನೆಂದು. ಈ ಬಗ್ಗೆ ದೂರುದಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸುವಂತೆ ಸಮಿತಿಗೆ ಮನವಿ ಮಾಡಿದ್ದೇನೆ. ಅಲ್ಲದೆ,  ಬ್ರಿಟನ್ ಪೌರತ್ವಕ್ಕೆ ಅರ್ಜಿ ಸಲ್ಲಿಸಿರುವ ಕುರಿತಂತೆ ಬ್ರಿಟೀಷ್ ಅಧಿಕಾರಗಳ ಬಳಿ ಮಾಹಿತಿ ಕೇಳುವಂತೆ ತಿಳಿಸಿದ್ದೇನೆ. ನನ್ನ ಹೆಸರನ್ನು ಹಾಳು ಮಾಡಲು ಈ ಯತ್ನವನ್ನು ನಡೆಸಲಾಗಿದೆ. ದೂರು ನೀಡಿರುವವರು ದಾಖಲೆಗಳಿಲ್ಲದೆಯೇ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಆರೋಪ ಮಾಡಿರುವ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಕಿಡಿಕಾರಿರುವ ಅವರು, ನಾನು ಬ್ರಿಟೀಷ್ ಪೌರತ್ವವನ್ನು ಪಡೆದಿದ್ದೇನೆಂದು ಆರೋಪ ಮಾಡುತ್ತಿರುವ ಸ್ವಾಮಿ ಅವರು, ತಮ್ಮ ಬಳಿ ಈ ಬಗ್ಗೆ ದಾಖಲೆಗಳಿದ್ದರೆ ತೋರಿಸಿ ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ರಾಹುಲ್ ಪೌರತ್ವ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ರಾಹುಲ್ ಇಂಗ್ಲೆಂಡ್ ನಲ್ಲಿ ಕಂಪನಿಯೊಂದನ್ನು ಆರಂಭಿಸಲು ತಮ್ಮನ್ನು ಬ್ರಿಟಿಷ್ ಪ್ರಜೆಯೆಂದು ಘೋಷಿಸಿಕೊಂಡಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ಭಾರತದ ಪೌರತ್ವವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ, ಈ ಆರೋಪವನ್ನು ಕಾಂಗ್ರೆಸ್ ತಿರಸ್ಕರಿಸಿತ್ತು.

ನಂತರ ಬಿಜೆಪಿ ಸಂಸದ ಮಹೇಶ್ ಗಿರಿ ಯವರು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪತ್ರವನ್ನು ಬರೆದಿದ್ದರು. ಈ ಪತ್ರವನ್ನು ಪರಿಶೀಲಿಸಿದ್ದ ಸುಮಿತ್ರಾ ಮಹಾಜನ್ ಅವರು ಪ್ರಕರಣವನ್ನು ಅಡ್ವಾಣಿ ನೇತೃತ್ವದ ನೀತಿಕ ಸಮಿತಿಗೆ ವಹಿಸಿದ್ದರು. ನೀತಿ ಸಮಿತಿ ದೂರು ಸಂಬಂಧ ಸ್ಪಷ್ಟನೆ ನೀಡುವಂತೆ ರಾಹುಲ್ ಗಾಂಧಿಯವರಿಗೆ ಮಾರ್ಚ್ 14 ರಂದು ನೋಟಿಸ್ ವೊಂದನ್ನು ಜಾರಿ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com