ಸ್ಟಿಂಗ್ ವಿಡಿಯೋದಲ್ಲಿ ಇರುವುದು ನಾನೇ: ಹರೀಶ್ ರಾವತ್

ತಮ್ಮ ಸರ್ಕಾರ ಉಳಿಸಿಕೊಳ್ಳಲು ಶಾಸಕರಿಗೆ ಲಂಚ ಆಮಿಷ ಒಡ್ಡಿದ್ದಾರೆ ಎನ್ನಲಾದ ವಿಡಿಯೋದಲ್ಲಿ ಇರುವುದು ನಾನೇ ಎಂದು ಉತ್ತರಾಖಂಡ ಸಿಎಂ ಹರೀಶ್ ರಾವತ್ ಹೇಳಿದ್ದಾರೆ...
ಉತ್ತರಾಖಂಡ ಸಿಎಂ ಹರೀಶ್ ರಾವತ್ (ಸಂಗ್ರಹ ಚಿತ್ರ)
ಉತ್ತರಾಖಂಡ ಸಿಎಂ ಹರೀಶ್ ರಾವತ್ (ಸಂಗ್ರಹ ಚಿತ್ರ)

ಡೆಹ್ರಾಡೂನ್: ತಮ್ಮ ಸರ್ಕಾರ ಉಳಿಸಿಕೊಳ್ಳಲು ಶಾಸಕರಿಗೆ ಲಂಚ ಆಮಿಷ ಒಡ್ಡಿದ್ದಾರೆ ಎನ್ನಲಾದ ವಿಡಿಯೋದಲ್ಲಿ ಇರುವುದು ನಾನೇ ಎಂದು ಉತ್ತರಾಖಂಡ ಸಿಎಂ ಹರೀಶ್ ರಾವತ್  ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ್ದ ಕುಟುಕು ಕಾರ್ಯಾಚರಣೆ ದೃಶ್ಯದ ಸಾಚಾತನಕ್ಕಾಗಿ ಕೇಂದ್ರ ಗೃಹಸಚಿವಾಲಯ ಸಿಡಿಯನ್ನು ಚಂಡೀಗಢದಲ್ಲಿರುವ ಫೋರೆನ್ಸಿಕ್ ಲ್ಯಾಬೋರೇಟರಿಗೆ  ಕಳುಹಿಸಿತ್ತು. ಪರೀಕ್ಷೆ ನಡೆಸಿದ ಪ್ರಯೋಗಾಲಯವು ಸಿಡಿಯಲ್ಲಿರುವ ದೃಶ್ಯವು ಸಾಚಾತನದಿಂದ ಕೂಡಿದೆ ಎಂದು ವರದಿ ಸಲ್ಲಿಸಿತ್ತು. ಈ ವರದಿ ಹೊರಬಿದ್ದ ಬೆನ್ನಲ್ಲೇ ಸುದ್ದಿಗಾರರೊಂದಿಗೆ  ಮಾತನಾಡಿರುವ ಹರೀಶ್ ರಾವತ್ ಅವರು, ದೃಶ್ಯಾವಳಿಯಲ್ಲಿರುವುದು ತಾವೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿರುವುದು ಸಾಬೀತಾದರೆ  ಬಹಿರಂಗವಾಗಿ ಗಲ್ಲಿಗೇರಿಸಿ ಎಂದು ಸವಾಲು ಹಾಕಿದ್ದಾರೆ.

"ಓರ್ವ ಶಾಸಕರ ಜತೆ ಮಾತುಕತೆ ನಡೆಸುವ ವೇಳೆ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾದಂತೆ ತಾವು ಶಾಸಕರನ್ನು ಖರೀದಿಸುವ ಕೃತ್ಯದಲ್ಲಿ  ಭಾಗಿಯಾಗಿರಲಿಲ್ಲ. ಶಾಸಕರು ತಾಂತ್ರಿಕವಾಗಿ ಅನರ್ಹಗೊಂಡಿರಲಿಲ್ಲ. ಸುದ್ದಿಯಲ್ಲಿ ಪತ್ರಕರ್ತರು ಹೇಳಿರುವಂತೆ ನನಗಾಗಿ ಯಾರೇ ಆಗಲೆ 15 ಕೋಟಿ ರು.ಹಣವನ್ನು ಏಕೆ ಖರ್ಚು ಮಾಡುತ್ತಾರೆ.  ಇಂತಹ ಇಲ್ಲ ಸಲ್ಲದ ಸುದ್ದಿಗಳನ್ನು ನೀಡುವ ಮೂಲಕ ಜನರಿಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೀರಿ ಎಂದು ರಾವತ್ ಪ್ರಶ್ನಿಸಿದ್ದಾರೆ. ಅಲ್ಲದೆ ಒಂದೊಮ್ಮೆ ಶಾಸಕರ ಬೆಂಬಲ ಗಳಿಸಲು ಹುದ್ದೆ  ಅಥವಾ ಹಣದ ಆಮಿಷ ಒಡ್ಡಿದ್ದರೆ ನಗರದ ಹೃದಯಭಾಗದಲ್ಲಿರುವ ಕ್ಲಾಕ್‌ಟವರ್ ಮುಂಭಾಗ ಬಹಿರಂಗವಾಗಿ ಗಲ್ಲಿಗೇರಿಸಲಿ ಎಂದು ರಾವತ್ ಹೇಳಿದ್ದಾರೆ.

"ನನ್ನ ಮನೆ ಬಾಗಿಲು ಎಂದಿಗೂ ತೆರೆದೇ ಇರುತ್ತದೆ. ಶಾಸಕರ ಖರೀದಿ ಮಾಡುತ್ತಿರುವ ಕೃತ್ಯದಲ್ಲಿ ತಾವು ಭಾಗಿಯಾಗಿರುವುದು ಸಾಬೀತಾದರೆ ನಾನೇ ಸ್ವಯಂ ಜೈಲಿಗೆ ಹೋಗುತ್ತೇನೆ. ಮೋದಿ  ಮತ್ತು ಅಮಿತ್ ಶಾ ಬಿಜೆಪಿ ಯೇತರ ಸರ್ಕಾರ ವಿರುವ ರಾಜ್ಯಗಳ ಮೇಲೆ ತಮ್ಮ ಪ್ರಭಾವ ಭೀರಿ ಅಲ್ಲಿ ಸರ್ಕಾರವನ್ನು ಕುತಂತ್ರದಿಂದ ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾವತ್  ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com