ಜಾರ್ಖಂಡ್: ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಕೇವಲ 5 ರು ಏರಿಕೆ ಮಾಡಿರುವುದಕ್ಕೆ ಕಾರ್ಮಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೇವಲ 5 ರು. ಹೆಚ್ಚಳ ಮಾಡಿರುವುದನ್ನು ವಿರೋಧಿಸಿರುವ ಜಾರ್ಖಂಡ್ ಕಾರ್ಮಿಕರು ಕೇಂದ್ರ ಸರ್ಕಾರ ಏರಿಸಿರುವ 5. ರು ವೇತನವನ್ನು ಲಕೋಟಯಲ್ಲಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಇತ್ತೀಚೆಗೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ನೀಡುವ ವೇತನವನ್ನು 162 ರೂ.ಗಳಿಂದ 167 ರೂ.ಗಳಿಗೆ ಹೆಚ್ಚಳ ಮಾಡಿದೆ. ಆದರೆ ಇದು ಬರ ಪೀಡಿತ ಪ್ರದೇಶದ ಜನರಿಗೆ ಸಮಾಧಾನ ಉಂಟು ಮಾಡಿಲ್ಲ. ಹಾಗಾಗಿ ಅವರು ವಿನೂತನ ಪ್ರತಿಭಟನೆ ಮಾರ್ಗ ಹಿಡಿದಿದ್ದಾರೆ.
ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಭಾನುವಾರ ನೂರಾರು ಕಾರ್ಮಿಕರು ಲಕೋಟೆಯಲ್ಲಿ 5 ರೂ. ನೋಟು ಮತ್ತು ನಮ್ಮ ವೇತನ ಹೆಚ್ಚಳ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಸಂದೇಶವನ್ನು ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.
ಜಾರ್ಖಂಡ್ನಲ್ಲಿ ಕೂಲಿ ಕಾರ್ಮಿಕರು ಮತ್ತು ಉದ್ಯೋಗ ಖಾತ್ರಿ ಹೊರತಾದ ಕೆಲಸಗಳಿಗೆ ಬಳಕೆಯಾಗುವ ಕಾರ್ಮಿಕರಿಗೆ 212 ರೂ. ಕನಿಷ್ಠ ವೇತನವನ್ನು ನಿಗದಿ ಪಡಿಸಲಾಗಿದೆ. ಇದಕ್ಕಿಂತಲೂ ಕಡಿಮೆ ವೇತನವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಗದಿ ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ವೇತನ ಏರಿಕೆ ಸಹ ಮಾಡಲಾಗಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
Advertisement