ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದೊಂದು ಬೆಳವಣಿಗೆಗಳಾಗುತ್ತಿದ್ದು, ಇತ್ತೀಚಿನ ವರದಿ ಪ್ರಕಾರ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯವೇ ದುರ್ಬಲಗೊಳಿಸಿತ್ತು ಎಂಬ ಆರೋಪ ಕೇಳಿಬಂದೆ.
ಹಣದುರುಪಯೋಗ ತಡೆ ಕಾಯ್ದೆ 2002 ರ ಅಡಿಯಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣವನ್ನು ತನಿಖೆ ನಡೆಸಲು ಇಡಿ(ಜಾರಿ ನಿರ್ದೇಶನಾಲಯ) ಆಸಕ್ತಿ ತೋರಿರಲಿಲ್ಲ, 2013 ರ ಡಿಸೆಂಬರ್ ನಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿದ ನಂತರವೂ 7 ತಿಂಗಳ ವರೆಗೆ ತನಿಖೆಯನ್ನು ನಡೆಸಲಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇಷ್ಟೇ ಅಲ್ಲದೇ ಜಾರಿ ನಿರ್ದೇಶನಾಲಯದ ಈ ಹಿಂದಿನ ಮುಖ್ಯಸ್ಥರು ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣವನ್ನು ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಯಡಿಯಲ್ಲಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿ ತನಿಖೆಯನ್ನು ದುರ್ಬಲಗೊಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ನಾಗರಿಕ ಅಪರಾಧಗಳ ವ್ಯಾಪ್ತಿಗೆ ಬರುತ್ತದೆ, ಕಳೆದ ವರ್ಷದ ವರೆಗೂ ಈ ಕಾಯ್ದೆಯಡಿಯಲ್ಲಿ ಅಪರಾಧ ಸಾಬೀತಾದರೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಈಗ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಜಾರಿ ನಿರ್ದೇಶನಾಲಯಕ್ಕೆ ಅಸ್ತಿ ಮುಟ್ಟುಗೋಲು ಹಾಕಿ, ಶಂಕಿತರನ್ನು ವಿಚಾರಣೆ ನಡೆಸುವ ಅಧಿಕಾರವನ್ನು ನೀಡಲಾಗಿದೆ. ಹಣ ವರ್ಗಾವಣೆಯಾಗಿರುವುದರ ಕುರಿತು ಇಡಿ ಸೂಕ್ತ ತನಿಖೆ ನಡೆಸದೆ ಇರುವುದು ತನಿಖೆ ದುರ್ಬಲಗೊಳ್ಳುವಂತೆ ಮಾಡಿದೆ ಎಂಬುದು ಸದ್ಯಕ್ಕೆ ಕೇಳಿಬಂದಿರುವ ಹೊಸ ಆರೋಪವಾಗಿದೆ.
Advertisement