ನವದೆಹಲಿ: ಭಾರತ ದೇಶವೇ ನನ್ನ ಮನೆಯಾಗಿದ್ದು, ನನ್ನ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇರುವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ತಿರುವನಂತಪುರಂನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಸೋನಿಯಾಗಾಂಧಿ ಅವರು, ಹೆಲಿಕಾಪ್ಟರ್ ಹಗರಣದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡುವ ಬರದಲ್ಲಿ ಗದ್ಗದಿತರಾದರು. "ಭಾರತ ದೇಶದ ಮೇಲಿನ ನನ್ನ ದೇಶನಿಷ್ಠೆ ಮತ್ತು ದೇಶದ ಮೇಲಿನ ಪ್ರೇಮವನ್ನು ಕಿತ್ತುಕೊಳ್ಳಲು ನರೇಂದ್ರ ಮೋದಿಗೆ ಆಗದು. ಇಟಲಿಯಲ್ಲಿ ನನ್ನ ಬಂಧುಗಳು ಇದ್ದು, 93 ವರ್ಷದ ನನ್ನ ತಾಯಿಯೂ ಇದ್ದಾರೆ. ಅದಕ್ಕೆ ಎಂದೂ ನಾನು ನಾಚಿಕೆಪಟ್ಟುಕೊಳ್ಳಲಾರೆ. ನಾನು ಭಾರತಕ್ಕೆ 48 ವರ್ಷಗಳ ಹಿಂದೆ ಬಂದೆ. ಅಂದಿನಿಂದ ಭಾರತದಲ್ಲೇ ಇರುವೆ. ಭಾರತವೇ ನನ್ನ ಮನೆಯಾಗಿದ್ದು, ಇಲ್ಲೇ ನಾನು ನನ್ನ ಕೊನೆಯುಸಿರು ಎಳೆಯುತ್ತೇನೆ ಎಂದು ಸೋನಿಯಾ ಹೇಳಿದರು.
ಭಾರತ ದೇಶ ನನ್ನ ಪ್ರೀತಿ ಪಾತ್ರ ದೇಶವಾಗಿದ್ದು, ನಾನು ಭಾರತದಲ್ಲೇ ಸಾಯುತ್ತೇನೆ. ನನ್ನ ಅಸ್ಥಿಯೂ ಭಾರತದ ಮಣ್ಣಿನಲ್ಲೇ ವಿಲೀನಗೊಳ್ಳುತ್ತದೆ. ಭಾರತದೊಂದಿಗಿನ ಬಾಂಧವ್ಯವನ್ನು ಪ್ರಧಾನಿ ಮೋದಿ ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬುದು ಗೊತ್ತು. ಪ್ರಧಾನಿ ಮೋದಿ ಮತ್ತು ಆರೆಸ್ಸೆಸ್ನವರು ನನ್ನನ್ನು ಯಾವಾಗಲೂ ಬೈಯುತ್ತಿರುತ್ತಾರೆ. ಹೀಯಾಳಿಸುತ್ತಾರೆ. ನನ್ನನ್ನು ಕಪಟ ನಾಟಕದ ರಾಯಭಾರಿ ಎಂದು ಛೇಡಿಸುತ್ತಾರೆ. 48 ವರ್ಷಗಳಿಂದ ಇವರು ಇದೇ ಕೆಲಸ ಮಾಡುತ್ತಾ ಬಂದಿದ್ದಾರೆ' ಎಂದು ಸೋನಿಯಾ ಆಕ್ರೋಶ ವ್ಯಕ್ತಪಡಿಸಿದರು.
ಕೇರಳ ಹಾಗೂ ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ನನಗೆ ಇಟಲಿಯಲ್ಲಿ ಕುಟುಂಬವಿಲ್ಲ. ನಾನು ಅಲ್ಲಿಗೆ ಹೋಗೇ ಇಲ್ಲ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಅವರ ಕಾಲೆಳೆದಿದ್ದರು.
Advertisement