ಡೆಹ್ರಾಡೂನ್: ದೇವರ ಕೃಪೆಯಿಂದ ಮತ್ತು ಶಾಸಕರ ವಿಶ್ವಾಸದಿಂದ ನಾನು ವಿಶ್ವಾಸಮತ ಗೆದ್ದಿದ್ದೇನೆ ಎಂದು ಉತ್ತರಾಖಂಡ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಮಂಗಳವಾರ ಹೇಳಿದ್ದಾರೆ.
ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ನಡೆದ ವಿಶೇಷ 2 ಗಂಟೆಗಳ ಕಲಾಪದಲ್ಲಿ ಪಾಲ್ಗೊಂಡು ವಿಶ್ವಾಸ ಮತಯಾಚನೆ ಮಾಡಿದ ಹರೀಶ್ ರಾವತ್ ಅವರು, ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು ದೇವರ ಕೃಪೆಯಿಂದ ಮತ್ತು ಶಾಸಕರ ನಂಬಿಕೆ ಮತ್ತು ವಿಶ್ವಾಸದಿಂದ ವಿಶ್ವಾಸಮತ ಗೆದ್ದಿದ್ದೇನೆ ಎಂದು ಹೇಳಿದರು. ಅಲ್ಲದೇ ಇದೇ ವೇಳೆ ರಾಜ್ಯದಲ್ಲಿ ನಿನ್ನೆ ಆರಂಭಗೊಂಡಿರುವ ಚಾರ್ ಧಾಮ್ ಯಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತೇನೆ ಎಂದು ರಾವತ್ ಹೇಳಿದರು.
ಇನ್ನು ಉತ್ತರಖಂಡ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್ ಪಕ್ಷ ತಾನು 33 ಸ್ಥಾನಗಳನ್ನು ಗಳಿಸಿರುವುದಾಗಿ ಹೇಳಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡರಾದ ಇಂದಿರಾ ಹೃದಯೇಷ್ ಅವರು, "ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಬಿಎಸ್ ಪಿ, ಪಿಡಿಎಫ್ ಮತ್ತು ಯುಕೆಡಿ ಪಕ್ಷದ ಮುಖಂಡರಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದು ಹೇಳಿದರು. ಅಂತೆಯೇ ವಿಧಾನಸಭೆಯ ಒಳಗೆ ಏನು ನಡೆಯಿತು ಎಂಬ ವಿಚಾರದ ಬಗ್ಗೆ ತಾವು ಮಾತನಾಡುವುದಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಇನ್ನು ಬಿಜೆಪಿ ಮುಖಂಡ ತೀರತ್ ಸಿಂಗ್ ಅವರು ಮಾತನಾಡಿ "ವಿಶ್ವಾಸಮತ ಯಾಚನೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ನೀಡಲಾಗುತ್ತದೆ. ಕೈ ಎತ್ತುವ ಮೂಲಕ ಮತದಾನ ಮಾಡಲಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಾಳೆ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
Advertisement