ಹರೀಶ್ ರಾವತ್ ಗೆ ರಿಲೀಫ್; ವಿಶ್ವಾಸಮತ ಗೆದ್ದ ಕಾಂಗ್ರೆಸ್?

ಉತ್ತರಾಖಂಡ ರಾಜಕೀಯ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ (ಸಂಗ್ರಹ ಚಿತ್ರ)
ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ (ಸಂಗ್ರಹ ಚಿತ್ರ)

ಡೆಹ್ರಾಡೂನ್: ಉತ್ತರಾಖಂಡ ರಾಜಕೀಯ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್  ಅವರು ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ ಆರಂಭವಾದ ವಿಶ್ವಾಸಮತ ಯಾಚೆನ ಪ್ರಕ್ರಿಯೆ ಪ್ರಸ್ತುತ ಪೂರ್ಣಗೊಂಡಿದ್ದು, ವಿಶ್ವಾಸಮತ ಯಾಚನೆ ವರದಿ ನಾಳೆ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಲಿದೆ. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಲಾಗುತ್ತಿದ್ದು, ಬುಧವಾರ ಸುಪ್ರೀಂ ಕೋರ್ಟ್ ಉತ್ತರಾಖಂಡ ಸರ್ಕಾರದ ಭವಿಷ್ಯವನ್ನು ಘೋಷಣೆ ಮಾಡಲಿದೆ. ವಿಶ್ವಾತ ಮತ ಯಾಚನೆ ಪ್ರಕ್ರಿಯೆಗಾಗಿ  ಸುಪ್ರೀಂ ನಿರ್ದೇಶನದಂತೆ ಬೆಳಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ತಾತ್ಕಾಲಿಕವಾಗಿ ಎರಡು ಗಂಟೆಗಳ ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಲಾಯಿತು.

62 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರು ವಿಶ್ವಾತ ಮತ 32 ಮತಗಳ ಅಗತ್ಯ ಇದೆ. ಇನ್ನು ವಿಶ್ವಾಸಮತ ಯಾಚನೆ ವೇಳೆ  ಕಾಂಗ್ರೆಸ್ ಗೆ ಬಿಎಸ್ ಪಿ ಬೆಂಬಲ ನೀಡಿದ್ದು ದೊಡ್ಡ ವರದಾನವಾಗಿ ಪರಿಣಮಿಸಿದ್ದು, ಬಿಎಸ್ ಪಿ ಶಾಸಕರು ಕಾಂಗ್ರೆಸ್ ಗೆ ತನ್ನ ಬೆಂಬಲ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವಾಸಮತದಲ್ಲಿ 33 ಸ್ಥಾನ ಪಡೆದ ಕಾಂಗ್ರೆಸ್!
ಕಾಂಗ್ರೆಸ್ ಮೂಲಗಳು ಹೇಳಿಕೊಂಡಿರುವಂತೆ ವಿಶ್ವಾಸ ಮತ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಪಕ್ಷದ ಪರ ಒಟ್ಟು 33 ಮತಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಬಿಎಸ್ ಪಿ,  ಪಿಡಿಎಫ್, ಯುಕೆಡಿ ಪಕ್ಷಗಳ ಶಾಸಕರು ಕಾಂಗ್ರೆಸ್ ಪಕ್ಷದ ಪರ ಮತಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಶ್ವಾಸಮತಕ್ಕೂ ಮೊದಲೇ ಹೈಡ್ರಾಮಾ
ಇನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗುವದಕ್ಕೂ ಮೊದಲೇ ರಾಜಕೀಯ ಮೇಲಾಟ ನಡೆದಿದ್ದು, ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕ  ಭೀಮ್ ಲಾಲ್ ಆರ್ಯ ಅವರು ಕಾಂಗ್ರೆಸ್ ಕಡೆಗೆ ವಾಲಿದರೆ, ಕಾಂಗ್ರೆಸ್ ಸದಸ್ಯೆ ರೇಖಾ ಆರ್ಯ ಅವರು ಬಿಜೆಪಿ ಜೊತೆ ಸೇರಿಕೊಂಡು ‘ವಿ’ ಚಿಹ್ನೆ (ಜಯದ ಚಿನ್ಹೆ)ಪ್ರದರ್ಶಿಸಿದರು. ಬಿಎಸ್​ಪಿ  ಮುಖ್ಯಸ್ಥೆ ಮಾಯಾವತಿ ಅವರ ಪಕ್ಷದ ಇಬ್ಬರು ಶಾಸಕರು ಕಾಂಗ್ರೆಸ್​ಗೆ ಬೆಂಬಲ ಘೊಷಿಸಿದ ಬಳಿಕ ಈ ಬೆಳವಣಿಗೆ ನಡೆಯಿತು ಎಂದು ತಿಳಿದುಬಂದಿದೆ.

ವಿಶ್ವಾಸಮತಕ್ಕೂ ಮುನ್ನ ಬಿಜೆಪಿ ಸಭೆ
ವಿಶ್ವಾಸ ಮತ ಪ್ರಕ್ರಿಯೆ ಆರಂಭಕ್ಕೆ ಮುನ್ನ 28 ಸದಸ್ಯ ಬಲವುಳ್ಳ ಬಿಜೆಪಿ ತನ್ನ ಶಾಸಕರ ಸಭೆ ಕರೆದಿತ್ತು. ಖಾಸಗಿ ಹೋಟೆಲ್ ನಲ್ಲಿ ಸುಮಾರು 10 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಬಿಜೆಪಿ  ಶಾಸಕರಿಗೆ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಸಭೆ ಬಳಿಕ ಹೊರಬಂದ ಬಿಜೆಪಿ ಶಾಸಕರು ‘ಭಾರತ್ ಮಾತಾ ಕಿ ಜಯ್’ ಎಂದು ಘೊಷಣೆ  ಕೂಗುತ್ತಾ ಹೊರಬಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com