ನವದೆಹಲಿ: ಭಾರತೀಯ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರು.ಸಾಲ ಪಡೆದು ಅದನ್ನು ತೀರಿಸಲಾಗದೇ ವಂಚಿಸಿ ಲಂಡನ್ ಗೆ ಪರಾರಿಯಾಗಿರುವ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಜಾರಿ ನಿರ್ದೇಶನಾಲಯ ಇಂಟರ್ ಪೋಲ್ ಗೆ ಮನವಿ ಸಲ್ಲಿಸಿದೆ.
ಮೂಲಗಳ ಪ್ರಕಾರ ಐಡಿಬಿಐ ಬ್ಯಾಂಕ್ನಿಂದ ಕಿಂಗ್ಫಿಷರ್ ಏರ್ಲೈನ್ಸ್ಗೆಂದು ಪಡೆದಿದ್ದ 9,000 ಕೋಟಿ ರು. ಸಾಲವನ್ನು ವಿಜಯ್ ಮಲ್ಯ ವಿದೇಶಗಳಲ್ಲಿ ಆಸ್ತಿ ಖರೀದಿಗೆ ಬಳಸಿದ ಆರೋಪದ ಮೇರೆಗೆ ಉದ್ಯಮಿ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಜಾರಿ ನಿರ್ದೇಶನಾಲಯ ಸಿಬಿಐನ ಮೂಲಕವಾಗಿ ಇಂಟರ್ ಪೋಲ್ ಗೆ ಮನವಿ ಮಾಡಿದೆ.
ಸಾಲ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶತಾಗತಾಯ ಉಧ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಲು ಹರಸಾಹಸ ಪಡುತ್ತಿದ್ದು, ಈ ಹಿಂದೆ ಕೇಂದ್ರ ಸರ್ಕಾರದ ಮೂಲಕವಾಗಿ ಬ್ರಿಟನ್ ಸರ್ಕಾರಕ್ಕೂ ಮಲ್ಯ ಗಡಿಪಾರಿಗೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿದ್ದ ಬ್ರಿಟನ್ ಸರ್ಕಾರ ಮಲ್ಯ ಗಡಿಪಾರು ಸಾಧ್ಯವಿಲ್ಲ. ಆದರೆ ಕಾನೂನಾತ್ಮ ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿತ್ತು.
ಈ ಹಿನ್ನಲೆಯಲ್ಲಿ ಮತ್ತೆ ಇಂಟರ್ ಪೋಲ್ ಮೊರೆ ಹೋಗಿರುವ ಜಾರಿ ನಿರ್ದೇಶನಾಲಯ ಸಿಬಿಐ ಮೂಲಕವಾಗಿ ಇಂಟರ್ ಪೋಲ್ ಗೆ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಮನವಿ ಸಲ್ಲಿಸಿದೆ. ನಿನ್ನೆಯಷ್ಟೇ ಜಾರಿ ನಿರ್ದೇಶನಾಲಯ ಭಾರತದಲ್ಲಿರುವ ವಿಜಯ್ ಮಲ್ಯ ಆಸ್ತಿ-ಪಾಸ್ತಿ ಮುಟ್ಟುಗೋಲಿಗೆ ಪ್ರಕ್ರಿಯೆ ಆರಂಭಿಸಿ, ಮಲ್ಯಗೆ ಸೇರಿದ ಸುಮಾರು 9 ಸಾವಿರ ಕೋಟಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಿತ್ತು.
Advertisement