

ಶ್ರೀನಗರ: ಗಡಿ ಕಾಯುವ ಭಾರತೀಯ ಯೋಧರಿಗಾಗಿ ಕಾಶ್ಮೀರದಲ್ಲಿ ಕಾಲೋನಿ ನಿರ್ಮಾಣ ಮಾಡುವ ಕೇಂದ್ರ ಸರ್ಕಾರದ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಶನಿವಾರ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಸಂಘಟನೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಸಂಘಟನೆ ಮುಖ್ಯಸ್ಥ ಯಾಸಿನ್ ಮಲ್ಲಿಕ್ ನೇತೃತ್ವದಲ್ಲಿ ಶ್ರೀನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸೇನೆಗೆ ಭೂಮಿ ನೀಡಲು ಯಾಸಿನ್ ವಿರೋಧಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಯಾಸಿನ್ ಮಲ್ಲಿಕ್, "ಸೇನೆ ವಿವಿಧ ಯೋಜನೆಗಳಿಗಾಗಿ ಮತ್ತು ಸೇನಾ ಯೋಧರಿಗಾಗಿ ನಾವು ಈಗಾಗಲೇ ಸಾಕಷ್ಟು ಭೂಮಿಯನ್ನು ನೀಡಿದ್ದೇವೆ. ಈಗ ಮತ್ತೆ ಯೋಧರಿಗಾಗಿ ಭೂಮಿ ಬೇಕು ಎಂದರೆ ನಾವು ನೀಡಲು ಸಿದ್ಧರಿಲ್ಲ. ಯೋಧರು ಕಾಶ್ಮೀರದವರೇ ಆಗಲಿ ಅಥವಾ ಭಾರತ ದೇಶದ ನಿವಾಸಿಗಳೇ ಆಗಲಿ ಯಾರೇ ಆದರೂ ನಾವು ಭೂಮಿ ನೀಡುವುದಿಲ್ಲ ಎಂದು ಯಾಸಿನ್ ಮಲ್ಲಿಕ್ ಹೇಳಿದ್ದಾರೆ.
ಇದೇ ವೇಳೆ ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳಿಗಾಗಿ ಪ್ರತ್ಯೇಕ ಕಾಲೋನಿ ನಿರ್ಮಾಣಕ್ಕೂ ಯಾಸಿನ್ ಮಲ್ಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆ ಕುರಿತು ಮಾತನಾಡಿದ ಯಾಸಿನ್ ಮಲ್ಲಿಕ್, ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ರಚನೆಯಾದ ಬಳಿಕ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಹೇಳಿದರು.
2015ರ ಏಪ್ರಿಲ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್ ಎನ್ ವೋಹ್ರಾ ಅವರು ಶ್ರೀನಗರದಲ್ಲಿ ಸೇನಾ ಕಾಲೋನಿ ನಿರ್ಮಾಣಕ್ಕಾಗಿ 21.6 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದರು. ಕಾಲೋನಿ ನಿರ್ಮಾಣಕ್ಕಾಗಿ ಜಾಗ ಗುರುತು ಮಾಡುವ ಪ್ರಕ್ರಿಯೆ ಕೂಡ ನಡೆದಿತ್ತು. ಆದರೆ ಸ್ಥಳೀಯ ಸಂಘಟನೆಗಳ ವ್ಯಾಪಕ ವಿರೋಧದ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಭೂಮಿ ನೀಡಿಕೆಗೆ ಹಿಂದೇಟು ಹಾಕಿತ್ತು.
Advertisement