ನವದೆಹಲಿ: ಬಿಸಿಲು, ಬರಗಾಲದಿಂದ ತತ್ತರಿಸಿ ಹೋಗಿರುವ ಜನತೆಗೆ ಖುಷಿಯ ವಿಚಾರವೊಂದಿದೆ. ಮೇ 28ರಿಂದ 30ರೊಳಗೆ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವರದಿ ಮಾಡಿದೆ. ಇದಾದ ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ಕರ್ನಾಟಕ ಪ್ರವೇಶಿಸಲಿದೆ.
ನೈರುತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೇ 18ರಿಂದ 20 ರ ನಡುವೆ ಆಗಮಿಸಲಿದೆ. ನಂತರ ಕೋಲ್ಕತ್ತಾ ರಾಜ್ಯಕ್ಕೆ ಜೂನ್ 10ರಂದು, ಮುಂಬೈಗೆ ಜೂನ್ 12 ಹಾಗೂ ದೆಹಲಿಗೆ ಜುಲೈ 1ರಂದು ಪ್ರವೇಶಿಸಬಹುದು ಎಂದು ಖಾಸಗಿ ಹವಾಮಾನ ಸಂಸ್ಥೆ ವರದಿ ಮಾಡಿದೆ.
ಈ ವರ್ಷ ಉತ್ತಮ ಮುಂಗಾರು ಮಳೆಯಾಗಬಹುದೆಂದು ಈ ಹಿಂದೆ ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಇದೀಗ ಸ್ಕೈಮೆಟ್ ಸಂಸ್ಥೆ ಕೂಡ ಅದನ್ನೇ ಹೇಳುತ್ತಿದೆ.
ಈ ಮಧ್ಯೆ ಮೇ ತಿಂಗಳಲ್ಲಿ ಬಂಗಾಳ ಕೊಲ್ಲಿ, ಅರಬ್ಬೀ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಚಂಡಮಾರುತ ಏಳುವ ಸಾಧ್ಯತೆಗಳಿವೆ. ಇದರಿಂದ ನಮ್ಮ ರಾಜ್ಯದಲ್ಲೂ ಮಳೆಯಾಗುವ ನಿರೀಕ್ಷೆಯಿದೆ.
Advertisement