ನವದೆಹಲಿ: ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಿಯಕರ ರಾಹುಲ್ ರಾಜ್ ಸಿಂಗ್ ಗೆ ಮುಂಬೈ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪ್ರತ್ಯುಷಾ ಪೋಷಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಏಪ್ರಿಲ್ 26ರಂದು ಪ್ರತ್ಯುಷ ಪ್ರಿಯಕರ ರಾಹುಲ್ ರಾಜ್ ಸಿಂಗ್ ಗೆ ಜಾಮೀನು ಮಂಜೂರು ಮಾಡಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆಗೆ ಪ್ರೇರೇಪಿಸಿರುವ ಬಗ್ಗೆ ರಾಹುಲ್ ವಿರುದ್ಧ ಯಾವುದೇ ಸಾಕ್ಷ್ಯಗಳು ಕಂಡುಬರದ ಹಿನ್ನಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ಹೇಳಿತ್ತು.
ಪ್ರತ್ಯುಷ ಪೋಷಕರು ರಾಹುಲ್ ಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್ ಗೆ ಜಾಮೀನು ನೀಡಿರುವುದರಿಂದ ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆ ಇದೆ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರತ್ಯುಷಾ ದೇಹದಲ್ಲಿ ಹಲವಾರು ಗಾಯದ ಗುರುತುಗಳ ಪತ್ತೆಯಾಗಿದೆ. ಹಾಗಾಗಿ, ಬಂಧನದಲ್ಲಿ ಆತನನ್ನು ವಿಚಾರಣೆಗೊಳಪಡಿಸಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.
ಬಾಲಿಕಾ ವಧು ಧಾರಾವಾಹಿ ಮೂಲಕ ಕಿರುತೆರೆಗೆ ಹೆಜ್ಜೆಯಿಟ್ಟಿದ್ದ ಪ್ರತ್ಯೂಷ ಬ್ಯಾನರ್ಜಿಯವರು ನಂತರ ಸಾಕಷ್ಟು ಖ್ಯಾತಿ ಗಳಿಸಿದ್ದರು. ಏ.1 ರಂದು ನೇಣಿಗೆ ಶರಣಾಗುವ ಮೂಲಕ ಪ್ರತ್ಯೂಷ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.