ಐದು ವರ್ಷಗಳ ಕಾಲ ಕೇರಳದ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿದ್ದರೂ ಉಮ್ಮನ್ ಚಾಂಡಿಗೆ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಅಲೆಯನ್ನುಂಟು ಮಾಡಲು ಸಾಧ್ಯವಾಗಲೇ ಇಲ್ಲ. ತನ್ನೊಂದಿಗೆ ಇದ್ದ ಸಚಿವರು, ಶಾಸಕರು ಒಬ್ಬೊಬ್ಬರೇ ಭಿನ್ನಮತದಿಂದಾಗಿ ದೂರ ಸರಿದಾಗಲೂ ಅವರ ಮನವೊಲಿಸುವಲ್ಲಿ ಚಾಂಡಿ ಎಡವಿದರು. ಚಾಂಡಿಯವರಿಗೆ ಕ್ಲೀನ್ ಇಮೇಜ್ ಇದ್ದರೂ ಅವರ ಸಚಿವ ಸಂಪುಟದಲ್ಲಿದ್ದ ಭ್ರಷ್ಟರಿಂದಾಗಿ ಜನರು ಚಾಂಡಿಯವರ ಮೇಲೆ ವಿಶ್ವಾಸ ಕಳೆದುಕೊಂಡು ಬಿಟ್ಟಿದ್ದರು. ಅಷ್ಟೇ ಅಲ್ಲದೆ ವಿಪಕ್ಷದಲ್ಲಿರುವ ಎಡರಂಗ, ಸರ್ಕಾರದ ಪ್ರತಿಯೊಂದು ನಡೆಯನ್ನು ವಿಮರ್ಶಿಸುತ್ತಲೇ ಇರುತ್ತಿತ್ತು. ವಿಪಕ್ಷಗಳ ಒತ್ತಡ, ಭಿನ್ನಮತೀಯರ ಹುಸಿ ಮುನಿಸು, ಹಗರಣ ಮೊದಲಾದ ಸಮಸ್ಯೆಗಳ ನಡುವೆಯೇ ಒದ್ದಾಡಿ ಚಾಂಡಿ 5 ವರ್ಷಗಳನ್ನು ಪೂರ್ತಿಗೊಳಿಸಿದ್ದರು.