ಕಾನ್ಪುರ: ಉತ್ತರಪ್ರದೇಶದಲ್ಲಿರುವ ವಿಶೇಷ ದೇಗುಲವೊಂದು ಮಳೆಗಾಲ ಆರಂಭಕ್ಕೂ ಮುನ್ನವೇ ಎಷ್ಟು ಪ್ರಮಾಣದ ಮಳೆಯಾಗುತ್ತದೆ ಎಂದು ಮೊದಲೇ ಮುನ್ಸೂಚನೆ ನೀಡುತ್ತದೆಯಂತೆ.
ದೇವಾಲಯದ ಗೋಪುರದ ಮೇಲಿರುವ ಕಲ್ಲಿನ ಮೇಲಿಂದ ಬೀಳುವ ಹನಿಗಳ ಆಧಾರದ ಮೇಲೆ ಮಳೆಗಾಲದಲ್ಲಿ ಎಷ್ಟು ಮಳೆ ಬೀಳುತ್ತದೆ ಎಂದು ಅಂದಾಜಿಸಬಹುದು ಎಂದು ಹೇಳಲಾಗುತ್ತಿದೆ. ಈ ವರೆಗೂ ಈ ದೇವಾಲಯ ನೀಡಿದ ಮಳೆ ಮುನ್ಸೂಚನೆ ಸುಳ್ಳಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಈ ವಿಶಿಷ್ಟ ದೇಗುಲವಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ.
ಕಾನ್ಪುರದ ಭಿತಾರ್ಗಾಂವ್ನ ಘಟಂಪುರ್ ನಲ್ಲಿರುವ ಜಗನ್ನಾಥ ದೇವಾಲಯ ಮಳೆಗಾಲ ಆರಂಭಕ್ಕೂ ಮೊದಲೇ ಮಾನ್ಸೂನ್ ಮಳೆಯ ಮುನ್ಸೂಚನೆ ನೀಡುತ್ತದೆಯಂತೆ. ಮುಂಗಾರು ಮಳೆ ಆರಂಭಕ್ಕೂ ಮೊದಲೇ ದೇವಾಲಯದ ಮೇಲ್ಚಾವಣಿ ಯಲ್ಲಿರುವ ಕಲ್ಲಿನಿಂದ ನೀರಿನ ಹನಿಗಳು ಬೀಳಲಾರಂಭಿಸುತ್ತವೆ. ಇದನ್ನು ಆಧರಿಸಿ ರೈತರು ಈ ವರ್ಷ ಎಷ್ಟು ಮಳೆಯಾಗಲಿದೆ ಎಂಬುದನ್ನು ಊಹಿಸುತ್ತಾರಂತೆ. ನೀರಿನ ಹನಿ ದೊಡ್ಡದಾಗಿದ್ದರೆ ಉತ್ತಮ ಮಳೆ ನೀರಿನ ಹನಿ ಸಣ್ಣದಾಗಿದ್ದರೆ ಕಡಿಮೆ ಮಳೆ ಬೀಳುತ್ತದೆ ಎಂದು ನಂಬಲಾಗುತ್ತದೆ.
ಅಚ್ಚರಿ ಎಂದರೆ ದೇವಾಲಯದ ಹನಿಗಳ ಮೂಲಕ ಮಾಡಲಾಗುವ ಮಳೆ ಮುನ್ಸೂಚನೆ ಈ ವರೆಗೂ ಸುಳ್ಳಾಗಿಲ್ಲವಂತೆ. ಹೀಗಾಗಿ ಈ ದೇವಾಲಯದ ಬಗ್ಗೆ ಹಲವು ಅಧ್ಯಯನ ನಡೆದಿದ್ದು, ಇನ್ನೂ ಮಳೆ ಮುನ್ಸೂಚನೆ ರಹಸ್ಯ ಬಹಿರಂಗವಾಗಿಲ್ಲ. ಜಗನ್ನಾಥ ದೇವಾಲಯದ ರಚನೆ ವಿಭಿನ್ನವಾಗಿದ್ದು, ಬೌದ್ಧ ಸ್ತೂಪದ ಮಾದರಿಯಲ್ಲಿದೆ. ಹೀಗಾಗಿ ಇದನ್ನು ಅಶೋಕ ಚಕ್ರವರ್ತಿ ಕಾಲದಲ್ಲಿ ರಚಿಸಿರಬಹುದೆಂದು ಹೇಳಲಾಗುತ್ತದೆ. ಈ ದೇವಾಲಯದ ನಿರ್ಮಾಣ ಯಾವ ಅವಧಿಯಲ್ಲಿ ನಡೆದಿತ್ತು, ಯಾರು ನಿರ್ಮಿಸಿದ್ದರು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ.
Advertisement