ಮಾಲ್ಕನ್ಗಿರಿ(ಒಡಿಶಾ): ವಿದೇಶಿ ಪ್ರವಾಸ ಬಿಟ್ಟು ನಮ್ಮ ಹಳ್ಳಿಗೆ ಭೇಟಿ ನೀಡಿ ಎಂದು ಬುಡಕಟ್ಟು ಜನಾಂಗದ 10 ವರ್ಷದ ಬಾಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.
ಜಪಾನಿನ ಜ್ವರ ನಮ್ಮ ಹಳ್ಳಿಗಳಿಗೆ ಬಡಿದಿದ್ದು ಇದುವರೆಗೂ 73 ಮಕ್ಕಳು ಇದರಿಂದ ಮೃತಪಟ್ಟಿದ್ದು ನಮ್ಮ ಹಳ್ಳಿಗೆ ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಪರಿಹರಿಸಿ ಎಂದು ಮನವಿ ಮಾಡಿದ್ದಾನೆ.
ನಮ್ಮ ಜೀವವನ್ನು ಕಾಪಾಡಿ, ಜಪಾನ್ ಜ್ವರದಿಂದ ನನ್ನ ಹಲವು ಸ್ನೇಹಿತರು ಮೃತಪಟ್ಟಿದ್ದಾರೆ. ನೀವು ವಿದೇಶವನ್ನು ಸುತ್ತುತ್ತಿರ ಒಂದು ಬಾರಿ ನಮ್ಮ ಹಳ್ಳಿಗೆ ಭೇಟಿ ನೀಡಿ ಮಕ್ಕಳು ಹೇಗೆ ಸಾಯುತ್ತಿದ್ದಾರೆ ಎಂದು ನೋಡಿ ಎಂದು ಶಿಕಪಲಿ ಗ್ರಾಮ ಪಂಚಾಯಿತಿಯ ಪೊಲ್ಕಂಡಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 10 ವರ್ಷದ ಬಾಲಕ ಮದಿ ಪತ್ರದಲ್ಲಿ ಬರೆದಿದ್ದಾನೆ.
ಮಲ್ಕನ್ಗಿರಿ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಉದಯ್ ಶಂಕರ್ ಮಿಶ್ರಾ ಅವರು ಈ ಸಂಬಂಧ ಮಾಹಿತಿ ನೀಡಿದ್ದು, ಇಲ್ಲಿಯವರೆಗೂ 27 ಮಕ್ಕಳು ಜಪಾನ್ ಜ್ವರದಿಂದ ಸಾವನ್ನಪ್ಪಿದ್ದು, ಇನ್ನಿತರ ಕಾರಣಗಳಿಂದ ಉಳಿದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.