ಎನ್'ಡಿಟಿವಿ ಮೇಲೆ ನಿಷೇಧ: ನಿರ್ಧಾರ ಸಮರ್ಥಿಸಿಕೊಂಡ ಪರಿಕ್ಕರ್

ಎನ್ ಡಿಟಿವಿ ಸುದ್ದಿ ವಾಹಿನಿ ಮೇಲಿನ ನಿಷೇಧ ಹೇರಿಕೆ ವಿಚಾರ ಭದ್ರತೆಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಹೇಳಿದ್ದಾರೆ...
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಪಣಜಿ: ಎನ್ ಡಿಟಿವಿ ಸುದ್ದಿ ವಾಹಿನಿ ಮೇಲಿನ ನಿಷೇಧ ಹೇರಿಕೆ ವಿಚಾರ ಭದ್ರತೆಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಹೇಳಿದ್ದಾರೆ.

ಸುದ್ದಿವಾಹಿನಿ ಮೇಲೆ ನಿಷೇಧ ಹೇರಿದ್ದಕ್ಕಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಇದು ಭದ್ರತೆಯ ವಿಚಾರವಾಗಿದ್ದು, ಸುದ್ದಿ ವಾಹಿನಿ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿದೆ. ಹೀಗಾಗಿ ಸುದ್ದಿ ವಾಹಿನಿ ಮೇಲೆ ನಿಷೇಧ ಹೇರಿಕೆಯ ನಿರ್ಧಾರವನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ಮಾಡುತ್ತಿರುವ ಸಮಯದಲ್ಲಿ ಎನ್'ಡಿಟಿವಿ ಸುದ್ದಿ ವಾಹಿನಿ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸಿತ್ತು. ಉಗ್ರರು ಇದನ್ನು ಬಳಸಿಕೊಂಡಿದ್ದರೆ, ದೊಡ್ಡ ಮಟ್ಟದಲ್ಲಿ ಅನಾಹುತ ಸಂಭವಿಸುತ್ತಿತ್ತು. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸಮಯದಲ್ಲಿ ಸ್ಥಳದ ಪ್ರತ್ಯಕ್ಷ ದೃಶ್ಯಗಳನ್ನು ತೋರಿಸಿದಾಗ ಉಗ್ರರು ಕಾರ್ಯಾಚರಣೆಯ ಮಾಹಿತಿಗಳನ್ನು ಪಡೆದುಕೊಳ್ಳಲು ಆರಂಭಿಸುತ್ತಾರೆ. ಪಠಾಣ್ ಕೋಟ್ ದಾಳಿ ವೇಳೆ ಸುದ್ದಿ ವಾಹಿನಿ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಸುದ್ದಿ ವಾಹಿನಿ ಮೇಲೆ 1 ದಿನದ ಕಾಲ ನಿಷೇಧವನ್ನು ಹೇರಲಾಗಿದೆ ಎಂದು ತಿಳಿಸಿದ್ದಾರೆ.

ಇದು ನಮ್ಮ ಸರ್ಕಾರವೇ ರೂಪಿಸಿದ ನಿಯಮವಲ್ಲ. 2008ರ 26/11ರಂದು ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದಾಗ ಅಂದಿನ ಯುಪಿಎ ಸರ್ಕಾರವೇ ರೂಪಿಸಿದ ನಿಯಮಗಳಾಗಿವೆ. ಕಳೆದ ಐದು ವರ್ಷಗಳಿಂದಲೂ ವಿವಿಧ ವಾಹಿನಿಗಳು ಈ ನಿಯಮಗಳನ್ನು ಉಲ್ಲಂಘಿಸಿದೆ. 21 ಬಾರಿ ವಿವಿಧ ವಾಹಿನಿಗಳು ಈ ನಿಯಮವನ್ನು ಉಲ್ಲಂಘಿಸಿದೆ.

ಭದ್ರತೆ ಕುರಿತಂತೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸುದ್ದಿ ವಾಹಿನಿಗಳಿಗೆ ಸೂಚನೆಗಳನ್ನು ನೀಡಿದೆ. ಸೂಚನೆಗಳ ನಡುವೆಯೂ ಎನ್ ಡಿಟಿವಿ ನಿಯಮವನ್ನು ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಸುದ್ದಿ ವಾಹಿನಿ ವಿರುದ್ಧ ಕ್ರಮಕೈಗೊಂಡಿದೆ. ಸುದ್ದಿ ವಾಹಿನಿಗೆ ಸರ್ಕಾರ ಸಂಪೂರ್ಣವಾಗಿ ನಿಷೇಧವನ್ನು ಹೇರಿಲ್ಲ. ಬದಲಾಗಿ 24 ಗಂಟೆಗಳ ಯಾವುದೇ ಕಾರ್ಯಕ್ರಮಗಳು ಹಾಗೂ ಸುದ್ದಿಗಳನ್ನು ಪ್ರಸಾರ ಮಾಡದಂತೆ ಆದೇಶಿಸಿದೆ ಎಂದು ತಮ್ಮ ನಿರ್ಧಾರವನ್ನು ಪರಿಕ್ಕರ್ ಅವರು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com