ಚೆನ್ನೈ: ಇರಾಕ್ನ ಅಣ್ಣ ಮತ್ತು ತಂಗಿಗೆ ಚೆನ್ನೈನ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೃದಯ ಕಸಿಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಫೋರ್ಟಿಸ್ ಮಲಾರ್ ಆಸ್ಪತ್ರೆಯ ಡಾ. ಕೆ.ಆರ್. ಬಾಲಕೃಷ್ಣನ್ ಮತ್ತು ಡಾ. ಸುರೇಶ್ ರಾವ್ ಹೃದಯ ಕಸಿ ಮಾಡಿದ ವೈದ್ಯರು.
ಇರಾಕ್ನ ಮೊಹಮ್ಮದ್ ಸಬಹ್ ಸುಲೈಮಾನ್ (16) ಮತ್ತು ಸಫಾಸಬಾಹ್ ಸುಲೈಮಾನ್ (13) ‘ಕಾರ್ಡಿಯೊಮ್ಯೊಪಥಿ’ ಎನ್ನುವ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ಕಾಯಿಲೆಗೆ ಸಕಾಲಕ್ಕೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಇತ್ತು.
ಮೊಹಮ್ಮದ್ ನಿರಂತರ ವಾಂತಿ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಆತನ ಆರೋಗ್ಯ ಪರಿಸ್ಥಿತಿ ತೀವ್ರ ಬಿಗಡಾಯಿಸತೊಡಗಿತ್ತು. ಈ ವೇಳೆ ಅವರ ಸಂಬಂಧಿಕರು ಭಾರತಕ್ಕೆ ತೆರಳಿ ಅಲ್ಲಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದರು. ಅದರಂತೆ ಕಸಿ ಮಾಡಲು ಹೃದಯ ಲಭ್ಯವಾದ ಬಳಿಕ ಮೊಹಮ್ಮದನನ್ನು ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿಯೂ ನಡೆಯಿತು.
ಆತನ ಸಹೋದರಿ ಸಫಾ ಸಬಾಹ್ ಸುಲೈಮಾನ್ ಉಸಿರಾಟದ ಸಮಸ್ಯೆ ಮತ್ತು ಕಾಲುಗಳು ಊದಿಕೊಂಡಿರುವ ತೊಂದರೆ ಅನುಭವಿಸಿತೊಡಗಿದಳು. ಸಫಾ ಸಹ ತನ್ನ ಸಹೋದರ ಮೊಹಮ್ಮದ್ ಎದುರಿಸುತ್ತಿದ್ದ ಬಹುತೇಕ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಿದ್ದಳು. ವೈದ್ಯರು ಮತ್ತೆ ಅದೇ ಚಿಕಿತ್ಸೆಯನ್ನು ನೀಡಿದರು. ಹೃದಯ ಕಸಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡರು. ಈ ಮೂಲಕ ಸಹೋದರ ಮತ್ತು ಸಹೋದರಿಯ ಬದುಕಿಗೆ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಮುಂದೆ ಈ ಮಕ್ಕಳು ಯಾವುದೇ ತೊಂದರೆಯಿಲ್ಲದೇ ಜೀವನ ಮಾಡಬಹುದು, ಎಂದಿನಂತೆ ಶಾಲೆಗೆ ತೆರಳಬಹುದು ಎಂದು ಫೋರ್ಟಿಸ್ ಆಸ್ಪತ್ರೆ ನಿರ್ದೇಶಕ ಕೆ.ಆರ್ ಬಾಲಕೃಷ್ಣನ್ ಹೇಳಿದ್ದಾರೆ.
Advertisement