ಚೆನ್ನೈ: ಎಸ್ ಆರ್ ಎಂ ವಂಚನೆ ಪ್ರಕರಣ ಸಂಬಂಧ ಕಳೆದ ಕೆಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ತಮಿಳು ಚಿತ್ರ ನಿರ್ಮಾಪಕ ಎಸ್ ಮಧನ್ ಅವರನ್ನು ಪೊಲೀಸರು ಸೋಮವಾರ ಕಡೆಗೂ ಬಂಧಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಮಧನ್ ರನ್ನು ಇಂದು ತಮಿಳುನಾಡಿನ ತಿರುಪುರದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸದ್ಯದಲ್ಲೇ ಈ ಕುರಿತು ಚೆನ್ನೈ ಹಿರಿಯ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.
ಹಲವು ದಿನಗಳಿಂದ ಆರೋಪಿಯನ್ನು ಬಂಧಿಸಲು ವಿಫಲವಾಗಿದ್ದ ಪೊಲೀಸರನ್ನು ಮದ್ರಾಸ್ ಹೈಕೋರ್ಟ್ ಹಲವು ಬಾರಿ ತರಾಟೆಗೆ ತೆಗೆದುಕೊಂಡಿತ್ತು.
ವೈದ್ಯಕೀಯ ಸೀಟು ನೀಡುವುದಾಗಿ ಭರವಸೆ ನೀಡಿ ವಿದ್ಯಾರ್ಥಿಗಳಿಂದ ಕೋಟ್ಯಾಂತರ ರುಪಾಯಿ ಪಡೆದು ವಂಚಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಸ್ ಆರ್ ಎಂ ಸಮೂಹದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿಆರ್ ಪಚ್ಚಮುತ್ತು ಅವರನ್ನು ಪೊಲೀಸರು ಈಗಾಗಲೇ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದ ಆರೋಪ ಎದುರಿಸುತ್ತಿರುವ ಎಸ್ ಮಧನ್ ಅವರ ವಿರುದ್ಧ ಸುಮಾರು 120 ಪೋಷಕರು ವಂಚನೆ ಕೇಸ್ ದಾಖಲಿಸಿದ್ದಾರೆ.