ಶ್ರೀನಗರ: ನೋಟು ನಿಷೇಧದ ಬಳಿಕ ಖೋಟಾ ನೋಟು ಹಾವಳಿ ತಗ್ಗಿರುವಂತೆಯೇ ಹಣವಿಲ್ಲದೇ ಪರದಾಡುತ್ತಿರುವ ಭಯೋತ್ಪಾದರು ಇದೀಗ ಬ್ಯಾಂಕುಗಳ ಮೇಲೆ ದಾಳಿ ಮಾಡಲು ಆರಂಭಿಸಿದ್ದು, ಬ್ಯಾಂಕ್ ಗೆ ನುಗ್ಗಿ ಲಕ್ಷಾಂತರ ಹಣ ದರೋಡೆ ಮಾಡಿರುವ ಘಟನೆ ಕಾಶ್ಮೀರದ ಬದಗಾಮ್ ನಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ನಾಲ್ಕು ಶಸ್ತ್ರಸಜ್ಜಿತ ಶಂಕಿತ ಉಗ್ರರು ಜಮ್ಮು ಮತ್ತು ಕಾಶ್ಮೀರದ ಬದಗಾಮ್ ಜಿಲ್ಲೆಯ ಮಲ್ಪೋರ್ ನಲ್ಲಿರುವ ಚಾರರ್ ಇ ಶರೀಫ್ ಬ್ಯಾಂಕಿಗೆ ನುಗ್ಗಿದ ನಾಲ್ಕು ಮಂದಿ ಶಸ್ತ್ರಸಜ್ಜಿತ ಮುಸುಕುಧಾರಿ ಉಗ್ರರು ಸಿಬ್ಬಂದಿಗಳನ್ನು ಬೆದರಿಸಿ ಬರೊಬ್ಬರಿ 12.45 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಪೊಲೀಸರ ಪ್ರಕಾರ ಮುಸುಕುಧಾರಿ ಶಂಕಿತ ಉಗ್ರರು ಬದಗಾಮ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಗಡಿ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ದರೋಡೆಗೊಳಗಾದ ಬ್ಯಾಂಕಿನಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿರಲಿಲ್ಲ ಎಂದು ಹೇಳಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ವ್ಯಾಗನ್ ಆರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಣ ದರೋಡೆ ಪರಾರಿಯಾಗಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬ್ಯಾಂಕ್ ನೊಳಗೆ ನುಗ್ಗಿದ ಶಂಕಿತ ಉಗ್ರರು ಕ್ಯಾಷಿಯರ್ ನ ಕಪಾಳಕ್ಕೆ ಹೊಡೆದು ಆತನಿಂದ ಹಣಕಸಿದು ತಮ್ಮ ಕಾರಿನಲ್ಲಿ ಪರಾರಿಯಾಗಿದ್ದಾರೆ. ನೋಟು ನಿಷೇಧದ ಬಳಿಕ ಇದೇ ಮೊದಲ ಬಾರಿಗೆ ಶಂಕಿತ ಉಗ್ರರು ಬ್ಯಾಂಕ್ ನಲ್ಲಿ ದರೋಡೆ ಮಾಡಿದ್ದು, ತಲೆಮರೆಸಿಕೊಂಡಿರುವ ಶಂಕಿತ ಉಗ್ರರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Advertisement