ನವದೆಹಲಿ: ಕಪ್ಪುಹಣದ ವಿರುದ್ಧ ಸಮರ ಸಾರಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನೋಟು ನಿಷೇಧಕ್ಕೂ ಮೊದಲೇ ತನ್ನ ಬಳಿ ಇರುವ ಕಪ್ಪುಹಣದ ಮೂಲಕ ಅಪಾರ ಪ್ರಮಾಣದ ಭೂಮಿ ಖರೀದಿಸಿತ್ತು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ದಾಖಲೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಮುಖಂಡ ರಣ್ ದೀಪ್ ಸುರ್ಜೇವಾಲಾ ಅವರು, ನೋಟು ನಿಷೇಧಕ್ಕೂ ಮೊದಲು ಬಿಜೆಪಿ ಪಕ್ಷ ಬಿಹಾರ ಮತ್ತು ದೇಶದ ಇತರೆ ವಿವಿಧ ಭಾಗಗಳಲ್ಲಿ ಕೋಟ್ಯಂತರ ಮೌಲ್ಯದ ಭೂಮಿ ಖರೀದಿಸಿದ್ದಾರೆ. ಈ ಭೂಮಿಗಳ ಖರೀದಿಗಾಗಿ ಬಿಜೆಪಿ ಚೆಕ್ ಮತ್ತು ಪ್ರಸ್ತುತ ನಿಷೇಧಕ್ಕೊಳಗಾಗಿರುವ 500 ಮತ್ತು 1000 ಬೆಲೆಯ ನೋಟುಗಳನ್ನು ನೀಡಿ ಖರೀದಿ ಮಾಡಿದೆ. ಭೂಮಿ ಖರೀದಿಗೆ ಬಿಜೆಪಿ ತನ್ನ ಕಪ್ಪುಹಣವನ್ನು ಬಳಕೆ ಮಾಡಿ ಅದನ್ನು ಇದೀಗ ಬಿಳಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೂ ಮೊದಲು ಕೇಂದ್ರ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿದ್ದ ಸುರ್ಜೇವಾಲಾ ಅವರು ನೋಟು ನಿಷೇಧದ ಹೆಸರಲ್ಲಿ ಕಪ್ಪುಹಣದ ವಿರುದ್ಧ ಸಮರ ಎಂಬ ಹೇಳಿಕೆಗಳೊಂದಿಗೆ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದರು. ಇದಾದ ಕೆಲವೇ ದಿನಗಳಲ್ಲಿ ಸುರ್ಜೇವಾಲಾ ಭೂ ಖರೀದಿ ಕುರಿತಂತೆ ದಾಖಲೆ ಬಿಡುಗಡೆ ಮಾಡಿದ್ದು, ನೋಟು ನಿಷೇಧ ಪ್ರಕ್ರಿಯೆಯೇ ದೊಡ್ಡ ಹಗರಣ ಎಂದು ಹೇಳಿದ್ದಾರೆ. ಬಿಜೆಪಿ ಪರವಾಗಿರುವ ಕಾಳಧನಿಕರ ಕಪ್ಪುಹಣವನ್ನು ಬಿಳಿಯಾಗಿಸಲೆಂದೇ ಎನ್ ಡಿಎ ಸರ್ಕಾರ ನೋಟು ನಿಷೇಧ ಮಾಡಿದೆ ಎಂದೂ ಅವರು ಆರೋಪಿಸಿದ್ದಾರೆ.
ರಣ್ ದೀಪ್ ಸುರ್ಜೇವಾಲಾ ಅವರ ಈ ಟ್ವೀಟ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವಾಗಲೀ ಅಥವಾ ಬಿಜೆಪಿಯಾಗಲೀ ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement