ನವದೆಹಲಿ: ಪಂಜಾಬ್ ನ ನಭಾ ಜೈಲಿನ ಮೇಲೆ ದಾಳಿ ಮಾಡಿದ ಶಸ್ತ್ರಸಜ್ಜಿತ ಉಗ್ರರು ಬಂಧಿತ ಐದು ಖಲಿಸ್ತಾನ ಉಗ್ರರೊಂದಿಗೆ ಪರಾರಿಯಾದ ಘಟನೆ ಸಂಬಂಧ ಕಿಡಿಕಾರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್ ಗೃಹ ಸಚಿವ ಸುಖ್ ಬೀರ್ ಬಾದಲ್ ಅವರು ರಾಜಿನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್ ಅವರು, ಜೈಲಿನಿಂದ ಉಗ್ರರು ಪರಾರಿಯಾದ ಘಟನೆ ಸಂಬಂಧ ಗೃಹಖಾತೆಯ ಜವಾಬ್ದಾರಿ ಹೊತ್ತಿರುವ ಸುಖ್ ಬೀರ್ ಬಾದಲ್ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ನಿನ್ನೆ ಗಡಿಯಲ್ಲಿ ಗುಂಡಿನ ಚಕಮಕಿ ವೇಳೆ ಅಮಾಯಕ ಹುಡುಗಿಯ ಸಾವು, ಇಂದು ಉಗ್ರರು ಜೈಲಿನಿಂದ ಪರಾರಿ ಘಟನೆಗಳನ್ನು ಅವಲೋಕಿಸಿದರೆ ಪಂಜಾಬ್ ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಭಾನುವಾರ ಪಂಜಾಬ್ ನ ನಭಾ ಜೈಲಿನ ಮೇಲೆ ದಾಳಿ ಮಾಡಿದ್ದ 10 ಮಂದಿ ಶಸ್ತ್ರಸಜ್ಜಿತ ಉಗ್ರರು ಖಲಿಸ್ತಾನ ಚಳವಳಿ ಉಗ್ರ ಮುಖಂಡ ಹರ್ಮಿಂದರ್ ಸಿಂಗ್ ಮಿಂಟೂ ಮತ್ತು ಇತರೆ ನಾಲ್ಕು ಮಂದಿ ಉಗ್ರರನ್ನು ಬಿಡಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪಂಜಾಬ್ ಸರ್ಕಾರ ಜೈಲಿನ ಅಧೀಕ್ಷಕ ಹಾಗೂ ಉಪ ಅಧೀಕ್ಷಕ ಸೇರಿದಂತೆ ಇತರೆ ಜೈಲು ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಿತ್ತು. ಅಲ್ಲದೆ ನಾಪತ್ತೆಯಾದ ಉಗ್ರರ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಿ ಪಂಜಾಬ್ ಸುತ್ತ ನಾಕಾಬಂದಿ ಹಾಕಿದೆ.
Advertisement