
ಮೆಹತ್ಪುರ: ಅಧಿಕಾರಕ್ಕೆ ಬಂದಿದ್ದೇ ಆದರೆ, ತಿಂಗಳೊಳಗಾಗಿ ಪಂಜಾಬ್'ನ್ನು ಮಾದಕ ವ್ಯಸನ ಮುಕ್ತ ರಾಜ್ಯವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಅಕಾಲಿ ನಾಯಕರು ಪಂಜಾಬ್ ರಾಜ್ಯವನ್ನು ಮಾದಕ ವ್ಯಸನಿಗಳ ನಾಡಾಗಿ ನಿರ್ಮಾಣ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷ ಇದನ್ನು ಸವಾಲಾಗಿ ತೆಗೆದುಕೊಳ್ಳಲಿದ್ದು, ಅಧಿಕಾರಕ್ಕೆ ಬಂದ ತಿಂಗಳೊಳಗಾಗಿ ಪಂಜಾಬ್ ನ್ನು ಮಾದಕ ವ್ಯಸನ ಮುಕ್ತ ರಾಜ್ಯವಾಗಿ ಮಾರ್ಪಡಿಸಲಿದೆ ಎಂದು ಹೇಳಿದ್ದಾರೆ.
ಆಕಾಲಿ ದಳದವರು ಅಧಿಕಾರಕ್ಕೆ ಬಂದ ನಂತರ 40ಲಕ್ಷಕ್ಕೂ ಅಧಿಕ ಯುವಕರು ಪಂಜಾಬ್ ನಲ್ಲಿ ಇಂದು ಮಾದಕ ವ್ಯಸನಕ್ಕೆ ತುತ್ತಾಗಿದ್ದಾರೆ. ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿರುವ ಜಾಲಕ್ಕೆ ಆಪ್ ಕಡಿವಾಣ ಹಾಕಲಿದೆ. ಮಾದಕ ವ್ಯಸನಿಗಳಾಗಿರುವ ಯುವಕರನ್ನು 6 ತಿಂಗಳೊಳಗಾಗಿ ವ್ಯಸನ ಮುಕ್ತರನ್ನಾಗಿ ಮಾಡಲಾಗುತ್ತದೆ. ಹಾಗೂ ಯುವಕರಿಗೆ ಉದ್ಯೋಗವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ತಪ್ಪು ಭರವಸೆಗಳನ್ನು ನೀಡುತ್ತಿದ್ದು, ಮನಮೋಹನ್ ಸಿಂಗ್ ಅವರ ಸರ್ಕಾರ ಕೇಂದ್ರದಲ್ಲಿ 10 ವರ್ಷಗಳ ಕಾಲ ಸರ್ಕಾರವನ್ನು ನಡೆಸಿತ್ತು. ಆದರೆ, ಬಹುಕೋಟಿ ಮಾದಕ ದ್ರವ್ಯಗಳ ಹಗರಣದಲ್ಲಿ ಭಾಗಿಯಾಗಿದ್ದ ಸಚಿವ ಬಿಕ್ರಮ್ ಮಜಿಥಿಯಾ ವಿರುದ್ಧ ಮಾತ್ರ ಎಂದಿಗೂ ಕ್ರಮಕೈಗೊಂಡಿರಲಿಲ್ಲ. ನಿಜ ಹೇಳಬೇಕೆಂದರೆ ಅಮರಿಂದರ್ ಸಿಂಗ್ ಅವರು ಸಿಬಿಐ ತನಿಖೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದಿದ್ದಾರೆ.
Advertisement