ಪುಣೆ: ಹಿರಿಯ ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಕೊಲೆ ಪ್ರಕರಣ ಸಂಬಂಧ, ವಿಶೇಷ ತನಿಖಾ ತಂಡ ಸನಾತನ ಸಂಸ್ಥಾನ ಸದಸ್ಯ ವಿರೇಂದ್ರ ತಾವ್ಡೆ ಅವರ ವಿರುದ್ಧ ಕೊಲ್ಲಾಪುರ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣ ತನಿಖೆ ನಡೆಸುತ್ತಿರುವ ಎಸ್ ಐಟಿ ತಾವ್ಡೆ ವಿರುದ್ಧ ಸುಮಾರು 400 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ನ್ನು ಮಂಗಳವಾರ ದಾಖಲಿಸಿದೆ.
ಈ ಮುಂಚೆ ನರೇಂದ್ರ ದಾಬೋಳ್ಕರ್ ಕೊಲೆ ಪ್ರಕರಣ ಸಂಬಂಧ ತಾವ್ಡೆಯನ್ನು ಸಿಬಿಐ ಬಂಧಿಸಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಗೋವಿಂದ್ ಪನ್ಸಾರೆ ಕೊಲೆ ಪ್ರಕರಣ ಸಂಬಂಧ ಕೊಲ್ಲಾಪುರ ಪೊಲೀಸರು ತಾವ್ಡೆಯನ್ನು ವಶಕ್ಕೆ ಪಡೆದಿದ್ದರು.
ಪನ್ಸಾರೆ ಕೊಲೆ ಪ್ರಕರಣದಲ್ಲಿ ತಾವ್ಡೆಯನ್ನು ಎರಡನೇ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ನಾವು ತಾವ್ಡೆ ವಿರುದ್ಧ ಕೊಲ್ಲಾಪುರ ಕೋರ್ಟ್ ಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿ ಸುಹೇಲ್ ಶರ್ಮಾ ಅವರು ತಿಳಿಸಿದ್ದಾರೆ.