ನವದೆಹಲಿ: ಸೇನಾ ಶಿಬಿರಗಳ ಮೇಲೆ ದಾಳಿ ಮಾಡುವುದು ಯುದ್ಧ ಅಪರಾಧವಾಗಿದ್ದು, ಈ ವಿಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಪಾಕಿಸ್ತಾನದ ನಿಜವಾದ ಮುಖವನ್ನು ಬಹಿರಂಗ ಪಡಿಸಬೇಕಿದೆ ಎಂದು ರಕ್ಷಣಾ ತಜ್ಞರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ಮಾಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಎಸ್.ಆರ್. ಸಿನ್ಹೋ ಅವರು, ಉರಿ ಸೆಕ್ಟರ್ ಹಾಗೂ ಬಾರಾಮುಲ್ಲಾ ಎರಡೂ ದಾಳಿಗಳೂ ಸೇನೆಯ ಶಿಬಿರಗಳ ಮೇಲೆಯೇ ನಡೆದಿದೆ. ಈ ರೀತಿಯ ದಾಳಿ ಯುದ್ಧ ಅಪರಾಧವಾಗಿದ್ದು, ದಾಳಿಯನ್ನು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಬೇಕಿದೆ. ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದ ನಿಜವಾದ ಮುಖವನ್ನು ಬಯಲು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸ್ಥಳೀಯ ಸಹಾಯವಿಲ್ಲದೆಯೇ ಝೇಲಂ ನದಿಯ ಮೂಲಕ ಸೇನಾ ಶಿಬಿರಕ್ಕೆ ತಲುವುದು ಅಷ್ಟು ಸುಲಭವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
Advertisement