ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡು ರಾಜಕೀಯದಿಂದ ದೂರ ಉಳಿದಿದ್ದ ಉಚ್ಚಾಟಿತ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ "ಸ್ವರಾಜ್ ಇಂಡಿಯಾ' ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.
ತಮ್ಮ ನೂತನ ಪಕ್ಷ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆಯಾದರೂ ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಭಾನುವಾರ ಪಕ್ಷದ ಸ್ಥಾಪನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಂದ್ರ ಯಾದವ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ತಮ್ಮ ಪಕ್ಷ ದೆಹಲಿಯಲ್ಲಿ "ಪರ್ಯಾಯ ರಾಜಕಾರಣ" ಮಾಡಲಿದೆಯೇ ಹೊರತು, ಆರವಿಂದ್ ಕೇಜ್ರಿವಾಲ್ರ ಆಮ್ ಆದ್ಮಿ ಪಕ್ಷದ ರೀತಿ ಅಡ್ಡದಾರಿ ಹಿಡಿಯುವುದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಇತ್ತೀಚೆಗೆ ಆಪ್ ಪಕ್ಷದಿಂದ ಉಚ್ಛಾಟನೆಗೊಂಡ ಸಂಸದ ಧರಮ್ ವೀರ್ ಗಾಂಧಿಯನ್ನು ತಾವು ಬೆಂಬಲಿಸುವುದಾಗಿ ಯೋಗೇಂದ್ರ ಯಾದವ್ ತಿಳಿಸಿದರು.
ಅಂತೆಯೇ ನಮ್ಮ ಕಾರ್ಯಕರ್ತರು ಯಾವುದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರಾಗಿದ್ದು, ಆಪ್ ರೀತಿ ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ತಾವು ಮಾಡುವುದಿಲ್ಲ. ತಮ್ಮ ನೂತನ ಪಕ್ಷ ಕೃಷಿಕ ಸಮಸ್ಯೆಯಿಂದ ಹಿಡಿದು ಭ್ರಷ್ಟಾಚಾರದ ವರೆಗಿನ ಎಲ್ಲ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲಿದೆ ಎಂದು ಯೋಗೇಂದ್ರ ಯಾದವ್ ಹೇಳಿದರು.
ಕಳೆದ ವರ್ಷ ಏಪ್ರಿಲ್ನಲ್ಲಿ ಆಪ್ನಿಂದ ಉಚ್ಚಾಟನೆಗೊಂಡ ಬಳಿಕ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರು ಸ್ವರಾಜ್ ಅಭಿಯಾನ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಸ್ವರಾಜ್ ಅಭಿಯಾನ ಹಾಗೂ ಸ್ವರಾಜ್ ಇಂಡಿಯಾ ಎರಡೂ ಕೂಡ ಅಸ್ತಿತ್ವದಲ್ಲಿರಲಿವೆ. ಸ್ವರಾಜ್ ಇಂಡಿಯಾ ಮೂಲಕ ರಾಜಕಾರಣ ಮಾಡಲಾಗುವುದು. ಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಜನರು ತಮಗೆ ಹೇಳಿದರೆ ಸ್ವರಾಜ್ ಅಭಿಯಾನ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗುವುದ. ತಮ್ಮ ಈ ಸಂಘಟನೆಗೆ ಪ್ರಶಾಂತ್ ಭೂಷಣ್ ಮುಖ್ಯಸ್ಥರಾಗಿರಲಿದ್ದಾರೆ ಎಂದು ಯಾದವ್ ಹೇಳಿದ್ದಾರೆ.
Advertisement