ಸಾಂದರ್ಭಿಕ ಚಿತ್ರ
ದೇಶ
3 ಬಾರಿ ತಲಾಖ್ ಹೇಳುವುದು, ಬಹುಪತ್ನಿತ್ವ ಇಸ್ಲಾಂ ಧರ್ಮದ ಅವಶ್ಯಕ ಅಂಗವಲ್ಲ: ಸುಪ್ರೀಂಗೆ ಕೇಂದ್ರ
ಮುಸ್ಲಿಂ ಮಹಿಳೆಯರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮೂರು ಬಾರಿ ತಲಾಖ್ ಹೇಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ,...
ನವದೆಹಲಿ: ಮುಸ್ಲಿಂ ಮಹಿಳೆಯರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮೂರು ಬಾರಿ ತಲಾಖ್ ಹೇಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ತಲಾಖ್ ಮತ್ತು ಬಹು ಪತ್ನಿತ್ವ ಇಸ್ಲಾಂ ಧರ್ಮದ ಅವಶ್ಯಕ ಅಂಗವೇನಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಈ ಸಂಬಂಧ ಕೋರ್ಟ್ ಇಂದು ಅಫಿಡವಿಟ್ ಸಲ್ಲಿಸಿರುವ ಎನ್ ಡಿಎ ಸರ್ಕಾರ, ಮೂರು ಬಾರಿ ತಲಾಖ್ ಹೇಳುವುದನ್ನು ಧರ್ಮದ ಭಾಗವಾಗಿ ಪರಿಗಣಿಸಲಾಗುವುದು ಎಂದು ಹೇಳುವ ಮೂಲಕ ಪತ್ನಿಯವರಿಗೆ ವಿಚ್ಛೇದನ ನೀಡುವುದು ಮತ್ತು ಮುಸ್ಲಿಮ್ ಸಂಪ್ರದಾಯಕ್ಕೆ ತಾನು ವಿರುದ್ಧವಾಗಿರುವುದಾಗಿ ಸ್ಪಷ್ಟಪಡಿಸಿದೆ.
ತಲಾಖ್ ಸಂಬಂಧ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ, ಮೂರು ಬಾರಿ ತಲಾಖ್ ಹೇಳಿ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನ ನೀಡುವುದು ಮಹಿಳೆಯರ ಪಾಲಿಗೆ ಅನ್ಯಾಯ ಎಂದು ವಾದಿಸಿದೆ.
ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದಂತಹ ವಿಷಯಗಳನ್ನು ತಮ್ಮದೇ ಆದ ನಾಗರಿಕ ಸಂಹಿತೆ ಮೂಲಕ ನಿಯಂತ್ರಿಸಲು ಸಂವಿಧಾನವು ಮುಸ್ಲಿಮರಿಗೆ ಅವಕಾಶ ನೀಡಿದೆ. ಕುಟುಂಬ ಸಂಬಂಧಿತ ವಿಷಯಗಳನ್ನು ನಿಭಾಯಿಸುವ ಮುಸ್ಲಿಮ್ ಕಾನೂನಿನಲ್ಲಿ ತಾನು ಎಷ್ಟರ ಮಟ್ಟಿಗೆ ಮಧ್ಯಪ್ರವೇಶ ಮಾಡಬಹುದು ಎಂಬ ಬಗ್ಗೆ ಸುಪ್ರೀಂಕೋರ್ಟ್ ಪರಿಶೀಲಿಸುತ್ತಿದೆ. ತ್ರಿವಳಿ ತಲಾಖ್ ಮೂಲಕ ತಮ್ಮ ಪತ್ನಿಯಂದಿರಿಗೆ ವಿಚ್ಛೇದನ ನೀಡಲು ಮುಸ್ಲಿಮ್ ಪುರುಷರಿಗೆ ಅವಕಾಶ ನೀಡುವ ಪದ್ಧತಿಯನ್ನು ಕೊನೆಗಾಣಿಸಬೇಕೆಂಬ ಮನವಿಗಳ ವಿಚಾರಣೆಯನ್ನು ನಡೆಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ