ಮುಂಬೈ: ಪಾಕಿಸ್ತಾನ ಕಲಾವಿದರು ನಟಿಸಿರುವ 'ಎ ದಿಲ್ ಹೈ ಮುಷ್ಕಿಲ್' ಸಿನಿಮಾವನ್ನು ಪ್ರದರ್ಶನ ಮಾಡದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮಂಗಳವಾರ ಮಲ್ಟಿಪ್ಲೆಕ್ಸ್ ಚಲನಚಿತ್ರ ಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಿದೆ.
ಸಾಕಷ್ಟು ವಿರೋಧಗಳ ನಡುವೆಯೂ ಕರಣ್ ಜೋಹರ್ ಅವರು 'ಎ ದಿಲ್ ಹೈ ಮುಷ್ಕಿಲ್' ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಂಎನ್ಎಸ್ ಚಿತ್ರದ ವಿರುದ್ಧದ ತಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದೆ, ಅಲ್ಲದೆ, ಚಿತ್ರವನ್ನು ಪ್ರದರ್ಶನ ಮಾಡುವ ಚಿತ್ರಮಂದಿರಗಳನ್ನು ಧ್ವಂಸಗೊಳಿಸರುವುದಾಗಿ ಬೆದರಿಕೆ ಹಾಕಿದೆ.
ಈ ಕುರಿತಂತೆ ಮಾತನಾಡಿರುವ ಅಮೇಯ್ ಖೋಪ್ಕರ್ ಅವರು, 'ಎ ದಿಲ್ ಹೈ ಮುಷ್ಕಿಲ್' ಚಿತ್ರಕ್ಕೆ ರಾಜ್ಯದಲ್ಲಿ ಸಾಕಷ್ಟು ವಿರೋಧಗಳಿವೆ. ಒಂದು ವೇಳೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಚಿತ್ರವನ್ನು ಪ್ರದರ್ಶನ ಮಾಡುವ ಧೈರ್ಯ ಮಾಡಿದರೆ, ಪರಿಣಾಮ ಸರಿಯಿರುವುದಿಲ್ಲ. ದುಬಾರಿ ವೆಚ್ಚದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಮಾಲೀಕರು ನೆನಪಿನಲ್ಲಿಟ್ಟುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಉರಿ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಡುವಂತೆ ಮಾಡಿದ್ದು, ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಕಲಾವಿದರು ಕೂಡಲೇ ಭಾರತವನ್ನು ತೊರೆಯುವಂತೆ (ಎಂಎನ್ ಎಸ್) ಮಹಾರಾಷ್ಟ್ರ ನವನಿರ್ಮಾಣ ಸೇನೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ಕೂಡ ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಿದೆ.
Advertisement