ಮುಂಬೈ: ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಎ ದಿಲ್ ಹೇ ಮುಷ್ಕಿಲ್' ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಮುಂದೆ ಭವಿಷ್ಯದಲ್ಲಿ ಎಂದಿಗೂ ಪಾಕಿಸ್ತಾನ ಕಲಾವಿದರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಭಾರತದ ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುಕೇಷ್ ಭಟ್ ಅವರು ಹೇಳಿದ್ದಾರೆ.
ಕರಣ್ ಜೋಹರ್ ನಿರ್ದೇಶನದ ಎ ದಿಲ್ ಹೇ ಮುಷ್ಕಿಲ್ ಚಿತ್ರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕೇಷ್ ಭಟ್ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ, ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿರುವ ಅವರು, ಚಿತ್ರ ನಿರ್ಮಾಪಕರು ಮುಂದೆ ಭವಿಷ್ಯದಲ್ಲಿ ಎಂದಿಗೂ ಪಾಕಿಸ್ತಾನ ಕಲಾವಿದರೊಂದಿಗೆ ಕೆಲಸ ಮಾಡುವುದಿಲ್ಲ. ಇದು ನಮ್ಮ ಮಂಡಳಿಯ ನಿರ್ಣಯವಾಗಿದ್ದು, ಮಂಡಳಿಯ ನಿರ್ಣಯವನ್ನು ಪಾಲಿಸುವಂತೆ ಎಲ್ಲಾ ನಿರ್ಮಾಪಕರಿಗೂ ಸೂಚನೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ದೇಶದ ಜನತೆಯ ಭಾವನೆಗಳಿಗೆ ಮೊದಲ ಆದ್ಯತೆಯನ್ನು ನೀಡಬೇಕು. ರಕ್ಷಣಾ ಸಚಿವಾಲಯದ ಕಲ್ಯಾಣಕ್ಕೆ ಸಹಾಯ ಮಾಡುವುದಾಗಿ ಕರಣ್ ಜೋಹರ್ ಸೇರಿದಂತೆ ಇನ್ನಿತರೆ ನಿರ್ಮಾಪಕರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
Advertisement