ನವದೆಹಲಿ: ಆರ್ ಜೆಡಿ ಮಾಜಿ ಸಂಸದ ಹಾಗೂ ಗ್ಯಾಂಗ್ ಸ್ಟರ್ ಶಹಾಬುದ್ದೀನನ್ನು ಬಿಹಾರದ ಸಿವಾನ್ ನಿಂದ ದೆಹಲಿಯ ತಿಹಾರ್ ಜೈಲಿಗೆ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ಶಹಾಬುದ್ದೀನ್, ಬಿಹಾರ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಶಹಾಬುದ್ದೀನ್ ನನ್ನು ಸಿವಾನ್ ಜಿಲ್ಲಾ ಕಾರಾಗೃಹದಿಂದ ದೆಹಲಿಯ ತಿಹಾರ್ ಜೈಲಿಗೆ ಸ್ಥಳಾಂತರಿಸಬೇಕು ಎಂದು ಹತ್ಯೆಗೀಡಾದ ಪತ್ರಕರ್ತ ರಾಜದಿಯೋ ರಂಜನ್ ಅವರ ಪತ್ನಿ ಅಶಾ ರಂಜನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ಸಂಬಂಧ ಕೇಂದ್ರ, ರಾಜ್ಯ ಹಾಗೂ ಆರೋಪಿಗೂ ನೋಟಿಸ್ ನೀಡಿದೆ.
ಇತ್ತೀಚಿಗಷ್ಟೇ ಶಹಾಬುದ್ದೀನ್ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿ ತೀರ್ಪು ನೀಡಿದ ತಾಸಿನ ಒಳಗೆ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶ ಸಂದೀಪ್ ಕುಮಾರ್ ಮುಂದೆ ಶರಣಾಗಿದ್ದರುರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ಕುಮಾರ್ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ನಂತರ ಸಿವಾನ್ ಜೈಲಿಗೆ ಕರೆದೊಯ್ಯಲಾಗಿತ್ತು.
ಎರಡು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಶಹಾಬುದ್ದೀನ್ಗೆ ಪಟ್ನಾ ಹೈಕೋರ್ಟ್ ಮೂರನೇ ಕೊಲೆ ಕೇಸಿನಲ್ಲಿ ಜಾಮೀನು ಮಂಜೂರು ಮಾಡಿತ್ತು. ಶಹಾಬುದ್ದೀನ್, ಬಿಹಾರದ ಆಳುವ ಸಮ್ಮಿಶ್ರ ಸರ್ಕಾರದ ಪ್ರಮುಖ ಪಾಲುದಾರನಾಗಿರುವ ಲಾಲು ಯಾದವ್ ಅವರ ಆರ್ಜೆಡಿ ಪಕ್ಷದ ಮಾಜಿ ಸಂಸದನಾಗಿದ್ದಾನೆ.