ಭಯೋತ್ಪಾದನೆಗೆ ನೀಡುವ ಬೆಂಬಲ ಕೂಡ ಕೆಲವೊಮ್ಮೆ ತಿರುಗುಬಾಣವಾಗಬಹುದು: ಪರಿಕ್ಕರ್
ನವದೆಹಲಿ: ಭಯೋತ್ಪಾದನೆಗೆ ಯಾವುದೇ ದೇಶವಾದರೂ ಅದಕ್ಕೆ ಬೆಂಬಲವನ್ನು ನೀಡಬಾರದು. ಕೆಲವೊಮ್ಮೆ ನಾವು ಬೀಸುವ ಬಾಣವೇ ನಮಗೆ ತಿರುಗುಬಾಣವಾಗಿ ಪರಿಣಮಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಂಗಳವಾರ ಹೇಳಿದ್ದಾರೆ.
ಬಲೂಚಿಸ್ತಾದ ಖ್ವೆಟ್ಟಾದಲ್ಲಿ ನಡೆದ ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಭಯೋತ್ಪಾದನೆ ಎಲ್ಲಿಯೇ ಇದ್ದರೂ, ಯಾವುದೇ ರೂಪದಲ್ಲಿಯೇ ಇದ್ದರೂ ಅದನ್ನು ಎಂದಿಗೂ ಒಪ್ಪಿಕೊಳ್ಳಬಾರದು. ಯಾವುದೇ ರೀತಿಯ ಹಿಂಸಾಚಾರವನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ದಾಳಿಯಲ್ಲಿ ಮೃತರಾದ ಜನರಿಗೆ ಸಂತಾಪವನ್ನು ಸೂಚಿಸುತ್ತೇನೆಂದು ಹೇಳಿದ್ದಾರೆ.
ಯಾವುದೇ ದೇಶವನ್ನು ಉದ್ದೇಶಿಸಿ, ಗುರಿಯಾಗಿಟ್ಟುಕೊಂಡು ನಾನು ವಿವರಣೆಯನ್ನು ನೀಡುತ್ತಿಲ್ಲ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದೇಶಿ ನಟರನ್ನು ಮಟ್ಟಹಾಕಬೇಕಿದೆ. ಭಯೋತ್ಪಾದನೆಗೆ ನೀಡುವ ಪ್ರಚೋದನೆಗಳು ಕೆಲವೊಮ್ಮೆ ನಮಗೇ ತಿರುಗುಬಾಣವಾಗಿ ಪರಿಣಮಿಸಿಬಿಡುತ್ತವೆ. ಈ ದಾಳಿ ಕೂಡ ಅದಕ್ಕೆ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.
ಬಲೂಚಿಸ್ತಾನದ ಖ್ವೆಟ್ಟಾದ ಪೊಲೀಸ್ ತರಬೇತಿ ಶಾಲೆಯ ಮೇಲೆ ಉಗ್ರರ ಗುಂಪೊಂದು ದಾಳಿ ಮಾಡಿ 60 ಮಂದಿ ಪೊಲೀಸರನ್ನು ಬಲಿ ಪಡೆದುಕೊಂಡಿದೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.