ಮುಂಬೈ: ಬಂಧನ ಭೀತಿ ಎದುರಿಸುತ್ತಿರುವ ವಿವಾದಾತ್ಮಕ ಇಸ್ಲಾಂ ಧರ್ಮ ಭೋಧಕ ಝಾಕೀರ್ ನಾಯಕ್ ಅವರು ತಮ್ಮ ತಂದೆ ಅಬ್ದುಲ್ ಕರೀಂ ನಾಯಕ್ ಅವರ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಲಿಲ್ಲ.
ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ 87 ವರ್ಷದ ಅಬ್ದುಲ್ ಕರೀಂ ನಾಯಕ್ ಅವರು ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು.
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ್ದ ಅಬ್ದುಲ್ ಕರೀಂ ನಾಯಕ್ ವೈದ್ಯರಾಗಿದ್ದರು. ಬಾಂಬೆ ಸೈಕಿಯಾಟ್ರಿಕ್ ಸೊಸೈಟಿಯಲ್ಲಿ ಕೆಲಸ ನಿರ್ವಹಿಸಿದ್ದ ಅವರು, ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡಿದ್ದರು.
ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಝಾಕೀರ್ ನಾಯಕ್ ಅವರು ಸದ್ಯ ಮಲೇಷಿಯಾದಲ್ಲಿ ನೆಲೆಸಿದ್ದು, ಬಂಧನ ಭೀತಿಯಿಂದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ.
ಕೇಂದ್ರ ಸರ್ಕಾರ ಹೊಸದಾಗಿ ಝಾಕೀರ್ ನಾಯಕ್ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸಿಲ್ಲ. ಆದರೆ ಅವರ ಎನ್ ಜಿಒ ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನವನ್ನು ಕಾನೂನು ಬಾಹಿರ ಚಟುವಟಿಕೆಗಳ(ನಿಯಂತ್ರಣ) ಕಾಯ್ಡೆಯಡಿ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲು ನಿರ್ಧರಿಸಿದೆ.
ಜುಲೈ 1ರಂದು ನಡೆದ ಢಾಕಾ ದಾಳಿಯ ಉಗ್ರರು ಝಾಕೀರ್ ನಾಯಕ್ ಭಾಷಣಗಳಿಂದ ಪ್ರಚೋದಿತರಾಗಿದ್ದರು ಎಂಬ ಆರೋಪವಿದೆ.