ಹೆಣ್ಣು ಮಗು ಎಂದು ಜ್ಯೋತಿಷಿ ಭವಿಷ್ಯ; ಅತ್ತೆ, ನಾದಿನಿಯರಿಂದ ಗರ್ಭಿಣಿ ಮೇಲೆ ಆ್ಯಸಿಡ್ ದಾಳಿ

ಹೆಣ್ಣು ಮಗು ಜನಿಸಲಿದೆ ಎಂದು ಜ್ಯೋತಿಷಿಯೊಬ್ಬ ನುಡಿದ ಭವಿಷ್ಯವನ್ನು ನಂಬಿ ಗರ್ಭಿಣಿ ಮಹಿಳೆ ಮೇಲೆ ಸಂಬಂಧಿಕರೇ ಆ್ಯಸಿಡ್ ದಾಳಿ ನಡೆಸಿದ ಹೀನ ಕೃತ್ಯ ನೆರೆಯ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನೆಲ್ಲೂರು: ಹೆಣ್ಣು ಮಗು ಜನಿಸಲಿದೆ ಎಂದು ಜ್ಯೋತಿಷಿಯೊಬ್ಬ ನುಡಿದ ಭವಿಷ್ಯವನ್ನು ನಂಬಿ ಗರ್ಭಿಣಿ ಮಹಿಳೆ ಮೇಲೆ ಸಂಬಂಧಿಕರೇ ಆ್ಯಸಿಡ್ ದಾಳಿ ನಡೆಸಿದ ಹೀನ ಕೃತ್ಯ ನೆರೆಯ ಆಂಧ್ರ  ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ಹತ್ತು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಮಹಿಳೆ ದೂರು ನೀಡುವುದರೊಂದಿಗೆ ಪ್ರಕರಣ ಇಂದು ಬೆಳಕಿಗೆ ಬಂದಿದೆ. ನೆಲ್ಲೂರು ಮೂಲದ 28 ವರ್ಷದ ತುಂಬು ಗರ್ಭಿಣಿ ಗಿರಿಜಾ  ಎಂಬುವವರ ಮೇಲೆ ಸ್ವಂತ ಅತ್ತೆ ಹಾಗೂ ನಾದಿನಿಯರು ಆ್ಯಸಿಡ್ ದಾಳಿ ಮಾಡಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದಾರೆ. ಪ್ರಸ್ತುತ ಗಿರಿಜಾ ಅವರ ಗಂಡ ಹಾಗೂ  ಮಾವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ?
ನೆಲ್ಲೂರಿನ ಗಿರಿಜಾ ಎಂಬುವವರು ಕಳೆದ 2 ವರ್ಷಗಳ ಹಿಂದೆ ಮದುವೆಯಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದರು ಎಂಬ ಕಾರಣಕ್ಕಾಗಿ ಅವರ ಅತ್ತೆ ಹಾಗೂ ನಾದಿನಿಯರು ಗಿರಿಜಾರನ್ನು ಹೀನವಾಗಿ ನಡಿಸಿಕೊಳ್ಳುತ್ತಿದ್ದಂತೆ. ಅವರ ಹಿಂಸೆಯ ನಡುವೆಯೇ ಜೀವನ ಸಾಗಿಸುತ್ತಿದ್ದ ಗಿರಿಜಾ ಮತ್ತೆ ಗರ್ಭಿಣಿಯಾಗಿದ್ದು,  ಈ ಬಾರಿಯಾದರೂ ಗಂಡುಮಗುವಾಗಲಿದೆ ಎಂದು ಎಣಿಸಿದ್ದ ಅತ್ತೆ ಮನೆಯವರು ಇತ್ತೀಚೆಗೆ ಗಿರಿಜಾರನ್ನು ಜ್ಯೋತಿಷಿಗಳ ಬಳಿಗೆ ಕರೆದೊಯ್ದಿದ್ದರಂತೆ.

ಈ ವೇಳೆ ಜ್ಯೋತಿಷಿ ಗಿರಿಜಾಗೆ ಮತ್ತೆ ಹೆಣ್ಣುಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಗಿರಿಜಾ ಅವರ ಅತ್ತೆ ಹಾಗೂ ನಾದಿನಿಯರು ಕಳೆದ ಆಗಸ್ಟ್  20ರಂದು ಆಕೆಯನ್ನು ಕೊಲ್ಲಲು ಯತ್ನಿಸಿದ್ದಾರೆ. ಆಕೆಯ ಹೊಟ್ಟೆ ಮೇಲೆ ಆ್ಯಸಿಡ್ ಎರಚಿದ್ದಾರೆ. ಈ ವೇಳೆ ಗಿರಿಜಾ ಅವರ ಕೂಗಾಟ ಕೇಳಿದ ಅಕ್ಕಪಕ್ಕದ ಮನೆಯವರು ಕೂಡಲೇ ಮನೆಗೆ ಆಗಮಿಸಿ  ಆ್ಯಸಿಡ್ ದಾಳಿಯಿಂದ ಒದ್ದಾಡುತ್ತಿದ್ದ ಗಿರಿಜಾರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಶೇ.30ರಷ್ಟು ಸುಟ್ಟಗಾಯಗಳಿಂದ ಗಿರಿಜಾ ಅವರು ಚೇತರಿಸಿಕೊಳ್ಳುತ್ತಿದ್ದು, ಇಂದು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆ್ಯಸಿಡ್ ದಾಳಿ  ಮಾಡಿದ ಗಿರಿಜಾ ಅವರ ಅತ್ತೆ ಹಾಗೂ ನಾದಿನಿಯರು ನಾಪತ್ತೆಯಾಗಿದ್ದು, ಪ್ರಸ್ತುತ ತನಿಖೆ ನಡೆಸುತ್ತಿರುವ ಪೊಲೀಸರು ಗಿರಿಜಾ ಅವರ ಗಂಡ ಹಾಗೂ ಮಾವನನ್ನು ಬಂಧಿಸಿ, ತನಿಖೆ  ಮುಂದುವರೆಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಆ್ಯಸಿಡ್ ಮಾರಾಟಕ್ಕೆ ನಿಷೇಧವಿದ್ದರೂ, ಗಿರಿಜಾ ಅತ್ತೆ ಕುಟುಂಬಕ್ಕೆ ಆ್ಯಸಿಡ್ ದೊರೆತಿದ್ದು ಹೇಗೆ ಎಂಬ ವಿಚಾರದ ಕುರಿತು  ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಇತ್ತೀಚಿನ ಜನಗಣತಿ ವರದಿಯಂತೆ ನೆಲ್ಲೂರಿನಲ್ಲಿ ಹೆಣ್ಣು ಮಕ್ಕಳ ತೀವ್ರ ಕೊರತೆ ಇದ್ದು, ಪ್ರತೀ ಸಾವಿರ ಗಂಡು ಮಕ್ಕಳಿಗೆ ಕೇವಲ 939 ಹೆಣ್ಣು ಮಕ್ಕಳು  ಮಾತ್ರ ಇದ್ದಾರಂತೆ. ಹೀಗಿದ್ದೂ ನೆಲ್ಲೂರಿನಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com