ನವದೆಹಲಿ: ಭಯೋತ್ಪಾದಕರಿಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಗುಪ್ತಚರ ಇಲಾಖೆಯ ವೀಕ್ಷಣೆಯಲ್ಲಿರುವ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಅವರ ಎನ್ ಜಿಒ ಪರವಾನಗಿ ನವೀಕರಿಸಿದ ಆರೋಪದ ಮೇರೆಗೆ ಕೇಂದ್ರ ಗೃಹ ಇಲಾಖೆಯ ಮೂವರು ಅಧಿಕಾರಿಗಳನ್ನು ಆಮಾನತು ಮಾಡಲಾಗಿದೆ.
ಝಾಕಿರ್ ನಾಯ್ಕ್ ಅವರ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ ಸಂಸ್ಥೆಯ ಪರವಾನಗಿ ಮುಕ್ತಾಯವಾಗಿದ್ದು, ಕಳೆದ ಆಗಸ್ಟ್ 19ರಂದು ಈ ಸಂಸ್ಥೆ ಪರವಾನಗಿಯನ್ನು ಕೇಂದ್ರ ಗೃಹ ಇಲಾಖೆ ವತಿಯಿಂದ ನವೀಕರಿಸಲಾಗಿದೆ. ಭಯೋತ್ಪಾದಕರಿಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಝಾಕಿರ್ ನಾಯ್ಕ್ ಹಾಗೂ ಅವರ ಎನ್ ಜಿಒ ಸಂಸ್ಥೆಯನ್ನು ಕೇಂದ್ರ ಗುಪ್ತಚರ ಸಂಸ್ಥೆ ವೀಕ್ಷಣೆಯಲ್ಲಿಟ್ಟಿದ್ದು, ಅವರ ವಿರುದ್ಧದ ತನಿಖೆ ಚಾಲ್ತಿಯಲ್ಲಿರುವಂತೆಯೇ ಎನ್ ಜಿಒ ಪರವಾನಗಿಯನ್ನು ನವೀಕರಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ ಕರ್ತವ್ಯ ಲೋಪದ ಮೇರೆಗೆ ಗೃಹ ಇಲಾಖೆಯ ಮೂವರು ಕಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೃಹ ಇಲಾಖೆಯ ಅಧಿಕಾರಿಯೊಬ್ಬರು, ಪ್ರಸ್ತುತ ಪರವಾನಗಿ ನವೀಕರಣ ಕುರಿತಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪರವಾನಗಿ ನವೀಕರಣ ಸಾಮಾನ್ಯದಂತೆಯೇ ಆಗಿದೆಯೇ ಅಥವಾ ದುರುದ್ದೇಶ ಪೂರಕದಿಂದ ಪರವಾನಗಿ ನವೀಕರಿಸಲಾಗಿದೆಯೇ ಎಂಬ ವಿಚಾರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪರವಾನಗಿ ನವೀಕರಣ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಕರ್ತವ್ಯಲೋಪ ಕಾಣುತ್ತಿದ್ದು, ತನಿಖೆಯಲ್ಲಿರುವ ಸಂಸ್ಥೆಯ ಪರವಾನಗಿ ನವೀಕರಿಸಲು ಸಾಧ್ಯವಿಲ್ಲ. ಹೀಗಾಗಿ ಪರವಾನಗಿ ನವೀಕರಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಜುಲೈನಲ್ಲಿ ಬಾಂಗ್ಲಾದೇಶ ರಾಜಧಾನಿ ಢಾಕಾದ ಹೋಲಿ ಆರ್ಟಿಸನ್ ಕೆಫೆ ಮೇಲೆ ಉಗ್ರರು ನಡೆಸಿದ್ದ ದಾಳಿ ವೇಳೆ ಓರ್ವ ಭಾರತೀಯ ಮೂಲದ ಮಹಿಳೆ ಸೇರಿದಂತೆ ಹತ್ತಾರು ಮಂದಿ ಸಾವನ್ನಪ್ಪಿದ್ದರು. ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಉಗ್ರರು ತಾವು ಝಾಕಿರ್ ನಾಯ್ಕ್ ಅವರ ಭಾಷಣದಿಂದ ಪ್ರಭಾವಿತರಾಗಿದ್ದೆವು ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಈ ಪ್ರಕರಣದ ಬಳಿಕ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಮೇಲೆ ಕೇಂದ್ರ ಗುಪ್ತರ ಇಲಾಖೆ ವೀಕ್ಷಣೆಯಲ್ಲಿದೆ. ಝಾಕಿರ್ ನಾಯ್ಕ್ ಅವರ ಭಾಷಣ ಹಾಗೂ ಅವರ ಎನ್ ಜಿಒ ಸಂಸ್ಥೆಯ ಹಣದ ಮೂಲದ ಕುರಿತು ತನಿಖೆ ನಡೆಸುತ್ತಿದೆ.
Advertisement