ನವದೆಹಲಿ: ಕಾಶ್ಮೀರ ವಿವಾದ ಕುರಿತಂತೆ ನಡೆಯಲಿರುವ ಸರ್ವಪಕ್ಷ ಸಭೆಗೆ ಹುರಿಯತ್ ಸಂಘಟನೆಯನ್ನು ಆಹ್ವಾನಿಸುವಂತೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ಶನಿವಾರ ಸಲಹೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕಾಶ್ಮೀರ ವಿವಾದ ಕುರಿತಂತೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಸರ್ವಪಕ್ಷ ಸಭೆ ವೇಳೆ ಹುರಿಯತ್ ಕಾನ್ಫರೆನ್ಸ್ ನ ನಾಯಕರೂ ಕೂಡ ಇರುವುದು ಉತ್ತಮ ಬೆಳವಣಿಗೆಯಾಗಿರಲಿದೆ. ಹೀಗಾಗಿ ಹುರಿಯತ್ ನಾಯಕರನ್ನು ಸರ್ಕಾರ ಆಹ್ವಾನಿಸಬೇಕಿದೆ ಎಂದಿದ್ದಾರೆ.
ಕಾಶ್ಮೀರದಲ್ಲಿರುವ ಜನತೆ ಮೇಲೆ ನಾವು ನಂಬಿಕೆಯನ್ನು ಇಡಬೇಕು. ಹೀಗಾಗಿ ಯಾವುದೇ ನಿಯಮಗಳನ್ನು ಹೇರದೆ ಸರ್ಕಾರ ಹುರಿಯತ್ ಸಂಘಟನೆಯನ್ನು ಆಹ್ವಾನಿಸಿ, ಅವರ ಪ್ರತಿಕ್ರಿಯೆಯನ್ನು ಕೇಳಬೇಕಿದೆ. ಅವರೊಂದಿಗೂ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಅಶಾಂತಿ, ಹಿಂಸಾಚಾರವನ್ನು ಕಂಡಿರುವ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಶಾಂತಿ ತರುವ ನಿಟ್ಟಿನಲ್ಲಿ ವಿವಿಧ ವರ್ಗಗಳ ಜನರೊಂದಿಗೆ ಮಾತುಕತೆ ನಡೆಸಲು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಸೆಪ್ಟೆಂಬರ್ 4ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದೆ. ನಿಯೋಗ ಸೆಪ್ಟೆಂಬರ್ 4ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಗೃಹ ಸಚಿವರು ಮುಂದಾಳತ್ವ ವಹಿಸಲಿದ್ದಾರೆ
ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರ ಕಣಿವೆ ವ್ಯಾಪಕ ಹಿಂಸಾಚಾರ, ಪ್ರತಿಭಟನೆ ಕಂಡಿದ್ದು, ವಿವಿಧ ವರ್ಗಗಳ ಜನರನ್ನು ಭೇಟಿ ಮಾಡಿ ಅವರನ್ನು ಸಮಾಧಾನಪಡಿಸಿ ಶಾಂತಿ ಸ್ಥಾಪಿಸಲು ನಿಯೋಗ ಭೇಟಿ ಮಾಡುವ ಉದ್ದೇಶ ಹೊಂದಿದೆ. ಈ ಸಂದರ್ಭದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರನ್ನು ಮತ್ತು ಸಂಘಟನೆಗಳನ್ನು ಭೇಟಿ ಮಾಡಲಿದೆ.
Advertisement