ಮನೇಸರ್ ಭೂ ಹಗರಣ: ಹರ್ಯಾಣ ಮಾಜಿ ಸಿಎಂ 'ಹೂಡಾ' ಮನೆ ಮೇಲೆ ಸಿಬಿಐ ದಾಳಿ
ನವದೆಹಲಿ: ಮನೇಸರ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೆಹಲಿ, ಚಂದೀಗಢ, ರೋಹ್ಟಕ್ ಮತ್ತು ಗುರುಗ್ರಾಮ್ನ ಸೇರಿದಂತೆ 20 ಸ್ಥಳಗಳಲ್ಲಿ ನಡೆಸಿದ ದಾಳಿಗಳಲ್ಲಿ ಸಿಬಿಐ ಉನ್ನತ ಆಡಳಿತಾಧಿಕಾರಿ ಎಸ್.ಎಸ್.ಧಿಲ್ಲಾನ್ ನೇತೃತ್ವದ ತಂಡ ಮನೆ ಮತ್ತು ಕಚೇರಿಗಳನ್ನು ಪರಿಶೀಲನೆ ನಡೆಸಿದೆ.
ಹರ್ಯಾಣದ ರೋಹ್ಟಕ್ನಲ್ಲಿರುವ ಹೂಡಾ ಮನೆಗೆ ಆಗಮಿಸಿದ ಸಿಬಿಐ ತಂಡ 2004 ಮತ್ತು 2007ರ ನಡುವೆ ಮನೇಸರ್ನಲ್ಲಿ 400 ಎಕರೆ ಭೂಮಿಯ ಮಂಜೂರಾತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದೆ.
ಗ್ರಾಮಸ್ಥರಿಂದ ಈ ಭೂಮಿಯನ್ನು ತೀರಾ ಅಗ್ಗದ ದರಕ್ಕೆ ಖರೀದಿಸಿ ಖಾಸಗಿ ಬಿಲ್ಡರ್ಗಳಿಗೆ ಅಧಿಕ ಹಣಕ್ಕೆ ಮಾರಾಟ ಮಾಡಲಾಗಿತ್ತೆಂದು ಆರೋಪಿಸಲಾಗಿದೆ.
ಭೂಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿಯಾಗಿದ್ದ ವೇಳೆ ಸುಮಾರು 912 ಎಕರೆ ಭೂಮಿಯನ್ನು ರೈತರಿಂದ ಸ್ವಾದೀನ ಪಡಿಸಿಕೊಳ್ಳಲಾಗಿತ್ತು. ಸರ್ಕಾರದ ನೀತಿಗೆ ವಿರೋಧವಾಗಿ ಭೂಮಿಯನ್ನು ವಶಪಡಿಸಿಕೊಂಡು, ಹಣ ಉಳ್ಳ ಉದ್ಯಮಿಗಳಿಗೆ, ಶ್ರೀಮಂತರಿಗೆ ಹಾಗೂ ಪ್ರಭಾವಿಗಳಿಗೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಭೂಮಿಯನ್ನು ಕಳೆದುಕೊಂಡ ರೈತರಿಗೆ ಇಂದರಿಂದ 1.500 ಕೋಟಿ ರೂ ನಷ್ಟವಾಗಿದೆ ಎಂದು ದೂರಲಾಗಿತ್ತು.