ಮಲೌತ್: ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರು ನಡೆಸುತ್ತಿದ್ದ ರ್ಯಾಲಿ ವೇಳೆ ಆಪ್ ಮತ್ತು ಅಕಾಲಿ ದಳದ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆ ವೇಳೆ 10 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ರ್ಯಾಲಿ ವೇಳೆ ಭಗವಂತ್ ಮಾನ್ ಅವರು ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕರಾದ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಬಿಕ್ರಮ್ ಸಿಂಗ್ ಮಜಿಥ್ಯಾ ಅವರ ವಿರುದ್ಧ ಟೀಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಕಾಲಿ ದಳ ಹಾಗೂ ಆಪ್ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿತ್ತು ಎಂದು ಹೇಳಲಾಗುತ್ತಿದೆ.
ಮೊದಲು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಇದು ಘರ್ಷಣೆಗೆ ತಿರುಗಿ, ಕಾರ್ಯಕರ್ತರು ಒಬ್ಬ ಮೇಲೆ ಒಬ್ಬರೂ ಕುರ್ಚಿಗಳನ್ನು ಎತ್ತಿಹಾಕಲು ಆರಂಭಿಸಿದ್ದಾರೆ. ಪರಿಣಾಮ 10 ಮಂದಿ ಗಾಯಾಗೊಂಡಿದ್ದಾರೆ.
ರ್ಯಾಲಿ ವೇಳೆ ಮಾನ್ ಅವರು ಹರ್ಸಿಮ್ರಾತ್ ಮತ್ತು ಮಜಿತ್ಯಾ ಅವರ ವಿರುದ್ಧ ಮಾತನಾಡಲು ಆರಂಭಿಸಿದ್ದರು. ಈ ವೇಳೆ ನಮ್ಮ ಕೆಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ಈ ವೇಳೆ ಆಪ್ ಕಾರ್ಯಕರ್ತರೊಂದಿಗೆ ಘರ್ಷಣೆ ಏರ್ಪಟ್ಟಿತ್ತು ಎಂದು ಅಕಾಲಿ ದಳದ ಕಾರ್ಯಕರ್ತರೊಬ್ಬರು ಹೇಳಿಕೊಂಡಿದ್ದಾರೆ.
ಘರ್ಷಣೆಯಿಂದಾಗಿ ರ್ಯಾಲಿಗೆ ತೊಡಕುಂಟಾದ ಪರಿಣಾಮ ಆಪ್ ಕಾರ್ಯಕರ್ತರು ಮಲೌತ್-ದೆಹಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆಹಿಡಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಅಕಾಲಿ ದಳದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಇದೇ ವೇಳೆ ಮಲೌತ್ ನಲ್ಲಿನ ಮಾರುಕಟ್ಟೆಯ ಮೇಲೆ ಕೆಲವರು ಕಲ್ಲುತೂರಾಟವನ್ನು ನಡೆಸಿದ್ದಾರೆ.
ಕಾರ್ಯಕರ್ತರ ನಡುವೆ ಏರ್ಪಟ್ಟ ಘರ್ಷಣೆ ಕುರಿತಂತೆ ಈ ವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸ್ ವಕ್ತಾರ ಮಾಹಿತಿ ನೀಡಿದ್ದಾರೆ.
Advertisement