ಮುಜಾಫರ್'ಬಾದ್: ಕಾಶ್ಮೀರಿ ಆತ್ಮಾಹುತಿ ಬಾಂಬರ್ ಗಳ ಸಂಖ್ಯೆಗಳನ್ನು ಹೆಚ್ಚಿಸಿ ಭಾರತೀಯ ಸೇನೆ ಪಾಲಿಗೆ ಕಾಶ್ಮೀರವನ್ನು ಸ್ಮಶಾನವಾಗಿ ನಿರ್ಮಾಣ ಮಾಡುತ್ತೇವೆಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯಿದ್ ಸಲಹುದ್ದೀನ್ ಶನಿವಾರ ಬೆದರಿಕೆ ಹಾಕಿದ್ದಾನೆ.
ಉಗ್ರ ಬುರ್ಹಾನಿ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ 50 ಕ್ಕೂ ಹೆಚ್ಚು ದಿನಗಳ ಕಾಲ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ವಿವಿಧ ವರ್ಗಗಳ ಜನರೊಂದಿಗೆ ಮಾತುಕತೆ ನಡೆಸಲು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕಾಶ್ಮೀರದಲ್ಲಿ ಇಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯಿದ್ ಸಲಹುದ್ದೀನ್, ಕಾಶ್ಮೀರ ಸಮಸ್ಯೆಗೆ ಉಗ್ರವಾದವನ್ನು ಬಿಟ್ಟು ಬೇರಾವುದೇ ಪರಿಹಾರವಿಲ್ಲ. ಸಮಸ್ಯೆ ಬಗೆಹರಿಕೆಗೆ ಶಾಂತಿಯುತ ಹಾದಿಯಿಲ್ಲವೆಂಬುದು ಕಾಶ್ಮೀರಿ ನಾಯಕರಿಗೆ, ಅಲ್ಲಿನ ಜನರಿಗೆ ಹಾಗೂ ಮುಜಾಹಿದ್ದಾನ್ ಸಂಘಟನೆಗಳಿಗೆ ತಿಳಿದಿರುವ ವಿಚಾರವಾಗಿದೆ ಎಂದು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.
ಬುರ್ಹಾನಿ ವಾನಿ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಭಾರತೀಯ ಸೇನೆ ತನ್ನ ಬಲವನ್ನು ಹೆಚ್ಚಿಸಿದಷ್ಟೂ ಪ್ರತ್ಯೇಕತಾವಾದಿಗಳ ಹಾಗೂ ಸ್ವಾತಂತ್ರ್ಯೋ ಹೋರಾಟಗಾರರ (ಭಯೋತ್ಪಾದಕರ) ಬಲ ಹೆಚ್ಚಾಗುತ್ತಾ ಹೋಗುತ್ತದೆ. ಕಾಶ್ಮೀರ ವಿವಾದವನ್ನು ಭಾರತ ಸಮಸ್ಯೆಯೆಂದು ಪರಿಗಣಿಸದೆಯೇ ಮಾತುಕತೆ ನಡೆಸಿದರೆ ಇದರಿಂದ ಪ್ರಯೋಜನವೇನಿದೆ.
ಭಾರತೀಯ ಸೇನೆ ತನ್ನ ಶಕ್ತಿಯನ್ನು ಪದರ್ಶನ ಮಾಡಿದಷ್ಟು, ನಮ್ಮ ಶಕ್ತಿ ಹೆಚ್ಚುತ್ತಾ ಹೋಗುತ್ತದೆ. ನಮ್ಮ ಶಕ್ತಿಯನ್ನು ಶೀಘ್ರದಲ್ಲೇ ತೋರಿಸುತ್ತೇವೆ. ಕಾಶ್ಮೀರದಲ್ಲಿ ಮತ್ತೆ ಸಮಸ್ಯೆಗಳು ಉಂಟಾಗುವುದಿಲ್ಲ. ಭಾರತೀಯ ಸೇನೆ ಪಾಲಿಗೆ ಕಾಶ್ಮೀರವನ್ನು ಸ್ಮಶಾನವಾಗಿ ಮಾರ್ಪಡಿಸುತ್ತೇವೆ. ಶೀಘ್ರದಲ್ಲೇ ಕಾಶ್ಮೀರವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆಂದು ಎಚ್ಚರಿಸಿದ್ದಾನೆ.
Advertisement