ಮುಂಬೈ: ಭಾರತೀಯ ಸೇನೆ ಪಾಲಿಗೆ ಕಾಶ್ಮೀರವನ್ನು ಸಶ್ಮಾನ ಮಾಡುತ್ತೇವೆಂದು ಹೇಳಿದ್ದ ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯಿದ್ ಸಲಹುದ್ದೀನ್ ಬಿಜೆಪಿ ಸೋಮವಾರ ಎಚ್ಚರಿಕೆ ನೀಡಿದ್ದು, ಬುರ್ಹಾನ್ ವಾನಿಯಂತೆಯೇ ಸಯ್ಯಿದ್ ಸಲಹುದ್ದೀನ್ ಕೂಡ ಅಂತ್ಯ ಕಾಣಲಿದ್ದಾನೆಂದು ಹೇಳಿದೆ.
ಸಲಹುದ್ದೀನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಶೈನಾ ಎನ್ ಸಿ ಅವರು, ಕಾಶ್ಮೀರವನ್ನು ಸ್ಮಶಾನ ಮಾಡುತ್ತೇವೆಂದು ಬೆದರಿಕೆ ಹಾಕುತ್ತಿರುವವರು ಮೊದಲು ಬುರ್ಹಾನ್ ವಾನಿ ಸ್ಥಿತಿ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಈ ರೀತಿಯಾಗಿ ಆಲೋಚನೆ ಮಾಡುವವರು ಬುಹ್ರಾನ್ ನಂತೆಯೇ ಅಂತ್ಯವನ್ನು ನೋಡಲಿದ್ದಾರೆಂದು ಹೇಳಿದ್ದಾರೆ.
ಕೇಂದ್ರದಲ್ಲಿರುವುದು ಅಸಮರ್ಥ ಸರ್ಕಾರವಲ್ಲ ಎಂಬುದನ್ನು ಹಿಜ್ಬುಲ್ ಮುಜಾಹಿದ್ದೀನ್ ಅರಿಯಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಜಕೀಯ ಶಕ್ತಿಯಿದೆ. ಇದನ್ನು ಸಲಹುದ್ದೀನ್ ಕೂಡ ತಿಳಿದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ನಡೆಸಿದ್ದ ಸರ್ವಪಕ್ಷ ಸಭೆ ಹಿನ್ನೆಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯಿದ್ ಸಲಹುದ್ದೀನ್ ಖಾಸಗಿ ಮಾಧ್ಯಮವೊಂದರಲ್ಲಿ ಹೇಳಿಕೆಯನ್ನು ನೀಡಿದ್ದ.
ಕಾಶ್ಮೀರ ಸಮಸ್ಯೆಗೆ ಉಗ್ರವಾದವನ್ನು ಬಿಟ್ಟು ಬೇರಾವುದೇ ಪರಿಹಾರವಿಲ್ಲ. ಸಮಸ್ಯೆ ಬಗೆಹರಿಕೆಗೆ ಶಾಂತಿಯುತ ಹಾದಿಯಿಲ್ಲವೆಂಬುದು ಕಾಶ್ಮೀರಿ ನಾಯಕರಿಗೆ, ಅಲ್ಲಿನ ಜನರಿಗೆ ಹಾಗೂ ಮುಜಾಹಿದ್ದಾನ್ ಸಂಘಟನೆಗಳಿಗೆ ತಿಳಿದಿರುವ ವಿಚಾರವಾಗಿದೆ. ಬುರ್ಹಾನಿ ವಾನಿ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಭಾರತೀಯ ಸೇನೆ ತನ್ನ ಬಲವನ್ನು ಹೆಚ್ಚಿಸಿದಷ್ಟೂ ಪ್ರತ್ಯೇಕತಾವಾದಿಗಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ (ಭಯೋತ್ಪಾದಕರ) ಬಲ ಹೆಚ್ಚಾಗುತ್ತಾ ಹೋಗುತ್ತದೆ. ಕಾಶ್ಮೀರಿ ಆತ್ಮಾಹುತಿ ಬಾಂಬರ್ ಗಳ ಸಂಖ್ಯೆಗಳನ್ನು ಹೆಚ್ಚಿಸಿ ಭಾರತೀಯ ಸೇನೆ ಪಾಲಿಗೆ ಕಾಶ್ಮೀರವನ್ನು ಸ್ಮಶಾನವಾಗಿ ನಿರ್ಮಾಣ ಮಾಡುತ್ತೇವೆಂದು ಹೇಳಿದ್ದ.
Advertisement