ರಾಳೆಗಣ್ ಸಿದ್ಧಿ (ಮಹಾರಾಷ್ಟ್ರ): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಹೋದ್ಯೋಗಿಗಳೇ ವಂಚನೆಯಲ್ಲಿ ಭಾಗಿಯಾಗುತ್ತಿರುವುದು ಬೇಸರ ತಂದಿದ್ದು, ಕೇಜ್ರಿವಾಲ್ ಮೇಲಿದ್ದ ನನ್ನ ನಂಬಿಕೆ ಸಂಪೂರ್ಣವಾಗಿ ಹೋಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಹೇಳಿದ್ದಾರೆ,
ಇತ್ತೀಚೆಗಷ್ಟೇ ಆಪ್ ಉಚ್ಛಾಟಿತ ನಾಯಕ ಸಂದೀಪ್ ಕುಮಾರ್ ಅವರ ವಿರುದ್ಧ ಸೆಕ್ಸ್ ಸಿಡಿಯೊಂದು ಬಿಡುಗಡೆಗೊಂಡಿತ್ತು. ಇದು ಆಪ್ ಪಕ್ಷವನ್ನು ಸಾಕಷ್ಟು ಮುಜುಗರಕ್ಕೊಳಗಾಗುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಣ್ಣಾ ಹಜಾರೆಯವರು, ಕೇಜ್ರಿವಾಲ್ ನನ್ನ ಜೊತೆಗಿದ್ದಾಗ ಗ್ರಾಮ್ ಸ್ವರಾಜ್ ಎಂಬ ಪುಸ್ತಕವನ್ನು ಬರೆದಿದ್ದರು. ಈ ರೀತಿಯ ಬೆಳವಣಿಗೆಯನ್ನು ಗ್ರಾಮ್ ಸ್ವರಾಜ್ ಎಂದು ಕರೆಯಲು ಸಾಧ್ಯವೇ? ಇಂದು ದೆಹಲಿ ನಡೆಯುತ್ತಿರುವ ಬೆಳವಣಿಗೆ ನನಗೆ ಸಾಕಷ್ಟು ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಪಕ್ಷ ಹೊರಬರುವುದಕ್ಕೂ ಮುನ್ನ ಕೇಜ್ರಿವಾಲ್ ಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದೆ, ಪಕ್ಷವನ್ನು ಸ್ಥಾಪನೆ ಮಾಡಿದ ನಂತರ ವಿಶ್ವದಾದ್ಯಂತ ಪಕ್ಷದ ಸಂಚಾರ ಆರಂಭವಾಗುತ್ತದೆ. ದೇಶದಾದ್ಯಂತ ರ್ಯಾಲಿಗಳು ಆರಂಭಗೊಳ್ಳುತ್ತದೆ. ಪಕ್ಷದಲ್ಲಿ ಸೇರ್ಪಡೆಗೊಳ್ಳುವ ವ್ಯಕ್ತಿಗಳು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ಹೇಗೆ ಗುರ್ತಿಸುತ್ತೀಯಾ? ಎಂದು ಕೇಳಿದ್ದೆ. ನನ್ನ ಪ್ರಶ್ನೆಗೆ ಕೇಜ್ರಿವಾಲ್ ಬಳಿ ಯಾವುದೇ ಉತ್ತರವಿರಲಿಲ್ಲ. ಆದರೆ, ಇದೀಗ ಅದರ ಅನುಭವವಾಗುತ್ತಿದೆ. ಯಾವುದೇ ಪಕ್ಷವಾಗಲಿ ಅಥವಾ ನಾಯಕರಾಗಲಿ, ಪಕ್ಷಕ್ಕೆ ಸೇರ್ಪಡೆಗೊಳ್ಳುವ ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಶೀಲಿಸುವುದು ಅಗತ್ಯ.
ಕೇಜ್ರಿವಾಲ್ ಸಾಕಷ್ಟು ವರ್ಷಗಳಿಂದಲೂ ನನ್ನ ಜೊತೆಗಿದ್ದ. ಆತನ ಮೇಲೆ ಸಾಕಷ್ಟು ನಂಬಿಕೆಯನ್ನು ಇಟ್ಟಿದ್ದೆ. ಭಾರತೀಯ ರಾಜಕೀಯದಲ್ಲಿ ಕೇಜ್ರಿವಾಲ್ ಹೊಸ ಹಾಗೂ ವಿಭಿನ್ನ ಉದಾಹರಣೆಯಾಗಲಿದ್ದಾನೆ. ದೇಶವನ್ನು ಉನ್ನತ ಹಾದಿಯತ್ತ ಕರೆದೊಯ್ಯಲಿದ್ದಾನೆಂದು ನಂಬಿದ್ದೆ. ಆದರೆ, ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿದರೆ ಬಹಳ ನೋವಾಗುತ್ತಿದೆ. ಕೇಜ್ರಿವಾಲ್ ಜೊತೆಗಿನ ಕೆಲ ಸಹೋದ್ಯೋಗಿಗಳು ಜೈಲಿಗೆ ಹೋಗುತ್ತಿದ್ದಾರೆ, ಕೆಲವರು ವಂಚನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಕೇಜ್ರಿವಾಲ್ ಬಗ್ಗೆ ನನಗಿದ್ದ ನಂಬಿಕೆ ಸಂಪೂರ್ಣವಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement