ತಿರುವನಂತಪುರಂ: ತಿರುವನಂತಪುಂನಲ್ಲಿರುವ ಬಿಜೆಪಿ ಕಚೇರಿ ಮೇಲೆ ಕಚ್ಚಾ ಬಾಂಬ್ ದಾಳಿಯೊಂದು ಮಂಗಳವಾರ ತಡರಾತ್ರಿ ನಡೆದಿದೆ.
ಕೇರಳ ಬಿಜೆಪಿ ಮುಖ್ಯಸ್ಥ ಕುಮ್ಮನಂ ರಾಜಶೇಖರನ್ ಅವರು ಕಚೇರಿಯಿಂದ ಹೊರ ಹೋದ 45 ನಿಮಿಷಗಳ ಬಳಿಕ ಕಚೇರಿ ಮೇಲೆ ಬಾಂಬ್ ಎಸೆಯಲಾಗಿದೆ ಎಂದು ತಿಳಿದುಬಂದಿದೆ.
ದಾಳಿ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ರಾಜಶೇಖರನ್ ಅವರು, ಸಿಪಿಎಂ ಆಡಳಿತದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಟ್ಟಿದೆ. ಸಾಧ್ಯವಾದಷ್ಟು ಸುರಕ್ಷತೆ ಬಗ್ಗೆ ಗಮನ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬಾಂಬ್ ದಾಳಿ ನಡೆದ ವೇಳೆ ಕಚೇರಿಯಲ್ಲಿ ಯಾರೊಬ್ಬರೂ ಇಲ್ಲವಾದ್ದರಿಂದ ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ. ದಾಳಿಯಿಂದಾಗಿ ಬಿಜೆಪಿ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳಕ್ಕೆ ಬಂದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ತಮ್ಮ ಮೇಲೆ ಕೇಳಿಬಂದಿರುವ ಆರೋಪವನ್ನು ತಳ್ಳಿ ಹಾಕಿರುವ ಸಿಪಿಎಂ, ದಾಳಿಯಲ್ಲಿ ನಮ್ಮ ಪಕ್ಷದ ಕೈವಾಡವಿಲ್ಲ. ರಾಜಕೀಯ ದುರುದ್ದೇಶದಿಂದ ಸಿಪಿಎಂ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.
Advertisement