ಲಖಿಮ್ಪುರ್: ಆಸ್ಪತ್ರೆಗೆ ದಾಖಲಿಸುವ ಮುನ್ನ ಮಾರ್ಗಮಧ್ಯೆ ಅಸುನೀಗಿದ ಮಗಳ ದೇಹವನ್ನು ಮನೆಗೆ ಕೊಂಡೊಯ್ಯಲು ಹಣವಿಲ್ಲದೆ ರಸ್ತೆ ಬದಿ ಶವವನ್ನಿಟ್ಟು ತಂದೆ ಭಿಕ್ಷೆ ಬೇಡಿದ ಕರುಣಾಜನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಲಖಿಮ್ಪುರ್ ಜಿಲ್ಲೆಯ ಸುಆಲಾಲಿ ಗ್ರಾಮದ ರಮೇಶ್ ಮಗಳ ಅಂತ್ಯಕ್ರಿಯೆಗಾಗಿ ಬಿಕ್ಷೆ ಬೇಡಿದ ನತದೃಷ್ಠ ತಂದೆಯಾಗಿದ್ದಾರೆ.
14 ವರ್ಷದ ಅಂಜಲಿ ತೀವ್ರ ಜ್ವರದಿಂದ ಬಳಲುತ್ತಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲು ರಮೇಶ್ ಮುಂದಾಗಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಅಂಜಲಿ ಮೃತಪಟ್ಟಿದ್ದಳು.
ಮಗಳ ಸಾವಿನಿಂದಾಗಿ ನೊಂದಿದ್ದ ರಮೇಶ್ ಸಹಾಯಕ್ಕಾಗಿ ಸಿಎಂಎಸ್(ಕಾಮನ್ ಸರ್ವಿಸ್ ಸೆಂಟರ್)ಗೆ ಕರೆ ಮಾಡಿದ್ದಾರೆ. ಆದರೆ ಸಿಎಂಎಸ್ ನಿಂದ ಯಾವುದೇ ಸಹಾಯ ಸಿಗದ ಕಾರಣ ಮಗಳ ಶವ ರವಾನೆಗಾಗಿ ಭಿಕ್ಷೆ ಬೇಡಿದ್ದಾರೆ.
ಮಗಳ ಶವವನ್ನಿಟ್ಟುಕೊಂಡು ಅಳುತ್ತಿದ್ದ ರಮೇಶ್ ಅವರಿಗೆ ಸಾರ್ವಜನಿಕರು 5-10 ರುಪಾಯಿ ಭಿಕ್ಷೆ ನೀಡಿದ್ದಾರೆ. ಈ ಹಣದಲ್ಲೇ ಮಗಳ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ರಮೇಶ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ರಸ್ತೆ ಬದಿ ಮಗಳ ಶವವನ್ನಿಟ್ಟುಕೊಂಡು ಭಿಕ್ಷೆ ಕೇಳುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಖ್ಯಮಂತ್ರಿ ಅಖಿಲೇಶ್ ಸರ್ಕಾರವನ್ನು ಸಾರ್ವಜನಿಕರು ಟೀಕಿಸಿದ್ದಾರೆ.