ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಯಾದವ್ ನಡುವಿನ ಜಗಳ ತಾರಕ್ಕೇರಿದ್ದು, ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಕುರಿತಂತೆ ಇದೇ ಮೊದಲ ಬಾರಿಗೆ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರು ಮೌನ ಮುರಿದು ಮಾತನಾಡಿದ್ದಾರೆ.
ಪಕ್ಷದಲ್ಲಿ ಮೂಡಿರುವ ಬಿಕ್ಕಟ್ಟು ಕುರಿತಂತೆ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿರುವ ಅವರು, ನಾನು ಇರುವವರೆಗೂ ಯಾವುದೇ ಕಾರಣಕ್ಕೂ ಪಕ್ಷ ಒಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷ ಕೇವಲ ರಾಜಕೀಯ ಪಕ್ಷವಲ್ಲ. ಇದೊಂದು ಕುಟುಂಬವಿದ್ದಂತೆ. ಶೀಘ್ರದಲ್ಲೇ ಅಖಿಲೇಶ್ ಶಿವಪಾಲ್ ಸಿಂಗ್ ಯಾದವ್ ಅವರನ್ನು ಭೇಟಿಯಾಗಲಿದ್ದಾರೆಂದು ಹೇಳಿದರು.
ಈ ವೇಳೆ ಶಿವಪಾಲ್ ಅವರ ಬೆಂಬಲಿಗರು ಘೋಷಣೆ ಕೂಗಲು ಆರಂಭಿಸಿದಾಗ ಕಾರ್ಯಕರ್ತರ ಮೇಲೆ ಕಿಡಿಕಾರಿದ ಅವರು, ನಾನು ಮಾತನಾಡುತ್ತಿರುವಾಗ ಸುಮ್ಮನಿರಬೇಕು. ಯಾರೂ ಮಾತನಾಡಬಾರದು ಎಂದು ಹೇಳಿದರು.
ನಂತರ ಮಾತನಾಡಿದ ಅವರು ಪುತ್ರ ಅಖಿಲೇಶ್ ತೆಗೆದುಕೊಂಡಿದ್ದ ಕೆಲ ನಿರ್ಧಾರಗಳ ವಿರುದ್ಧ ಬಾಂಬ್ ಸಿಡಿಸಲು ಆರಂಭಿಸಿದ್ದರು. ಲಂಚ ಸ್ವೀಕಾರ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದ ಗಣಿ ಸಚಿವೆ ಗಾಯತ್ರಿ ಪ್ರಜಾಪತಿ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸುವುದಾಗಿ ತಿಳಿಸಿದರು.
ಶಿವಪಾಲ್ ಯಾದವ್ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದು, ಮತ್ತೆ ಶಿವಪಾಲ್ ಅವರು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
Advertisement