ಭಾರತದಲ್ಲಿ ಪಾಕ್ ಕಲಾವಿದರು ಕಾಣಿಸಿಕೊಂಡರೆ ದೊಣ್ಣೆಪೆಟ್ಟು: ಮತ್ತೆ ಎಂಎನ್ಎಸ್ ಬೆದರಿಕೆ
ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಭಾರತ ತೊರೆಯುವಂತೆ ಪಾಕಿಸ್ತಾನ ಕಲಾವಿದರಿಗೆ ಗಡುವು ನೀಡಿ ಬೆದರಿಕೆ ಹಾಕಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಮತ್ತೆ ಶುಕ್ರವಾರ ಪಾಕಿಸ್ತಾನ ಕಲಾವಿದರಿಗೆ ಬೆದರಿಕೆ ಹಾಕಿದೆ.
ಭಾರತ ತೊರೆಯುವಂತೆ ಪಾಕಿಸ್ತಾನ ಕಲಾವಿದರಿಗೆ ನೀಡಲಾಗಿದ್ದ ಗಡುವು ಮುಗಿದು ಸಾಕಷ್ಟು ದಿನಗಳು ಕಳೆದಿವೆ. ಈಗಲೂ ಪಾಕಿಸ್ತಾನ ಕಲಾವಿದರು ಭಾರತದಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದ್ದೇ ಆದರೆ, ಕಣ್ಣಿಗೆ ಬಿದ್ದ ಕಲಾವಿದರಿಗೆ ದೊಣ್ಣೆಪೆಟ್ಟು ನೀಡಲಾಗುತ್ತದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಎಂಎನ್ಎಸ್ ಮುಖ್ಯಸ್ಥ ಅಮೇಯ್ ಖೊಪ್ಕರ್ ಅವರು, ಪಾಕಿಸ್ತಾನದೊಂದಿಗೆ ಕೈ ಮಿಲಾಯಿಸಲು ಇದು ಸಕಾಲವಲ್ಲ. ಪಾಕಿಸ್ತಾನ ಕಲಾವಿದರು ಕೆಲಸ ವೀಸಾದಿಂದ ಭಾರತಕ್ಕೆ ಬರುತ್ತಿಲ್ಲ. ಇದೀಗ ಅವರು ಪ್ರವಾಸಿಗರ ವೀಸಾ ಬಳಸಿಕೊಂಡು ಭಾರತಕ್ಕೆ ಬರುತ್ತಿದ್ದಾರೆ. ಇಂತಹ ಕಲಾವಿದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಕಲಾವಿದರು ಭಾರತ ತೊರೆಯುವಂತೆ ಈ ಹಿಂದೆ ಗಡುವು ನೀಡಲಾಗಿತ್ತು. ಗಡುವು ಮುಗಿದು ಸಾಕಷ್ಟು ಸಮಯ ಕಳೆದಿದೆ. ಈಗಲೂ ಪಾಕಿಸ್ತಾನ ಕಲಾವಿದರೂ ಭಾರತದಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದರೆ ದೊಣ್ಣೆ ಪೆಟ್ಟು ನೀಡಿ ಭಾರತ ತೊರೆಯುವಂತೆ ಮಾಡಲಾಗುತ್ತದೆ. ಜೊತೆಗೆ ಅವರಿಗೆ ಅವಕಾಶ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿರುವ ನಿರ್ದೇಶಕರು ಹಾಗೂ ನಿರ್ಮಾಪಕರಿಗೂ ಪೆಟ್ಟು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.