ಶುಲ್ಕ ನೀಡದಿದ್ದರೂ 'ಬಡ' ಕೇಜ್ರಿವಾಲ್'ಗಾಗಿ ಉಚಿತವಾಗಿ ಕೆಲಸ ಮಾಡುತ್ತೇನೆ: ರಾಮ್ ಜೇಠ್ಮಲಾನಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನನಗೆ ಶುಲ್ಕ ನೀಡದಿದ್ದರೂ ಪರವಾಗಿಲ್ಲ. ನಾನು ಅವರಿಗಾಗಿ ಉಚಿತವಾಗಿಯೇ ಕೆಲಸ...
ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ
ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನನಗೆ ಶುಲ್ಕವನ್ನು ನೀಡದಿದ್ದರೂ ಪರವಾಗಿಲ್ಲ. ನಾನು ಅವರಿಗಾಗಿ ಉಚಿತವಾಗಿಯೇ ಕೆಲಸ ಮಾಡುತ್ತೇನೆಂದು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿಯವರು ಮಂಗಳವಾರ ಹೇಳಿದ್ದಾರೆ. 
ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಹೂಡಿರುವ ಮಾನನಷ್ಟ ಮೊಕದ್ದಮೆಕ ಪ್ರಕರಣ ಸಂಬಂಧ ಅರವಿಂದ ಕೇಜ್ರಿವಾಲ್ ಅವರು ತಮ್ಮ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಜೇಠ್ಮಲಾನಿಯವರಿಗೆ ತೆರಿಗೆದಾರರ ಹಣವನ್ನು ಬಳಸಿಕೊಂಡು ಬಿಲ್ ಪಾವತಿ ಮಾಡುತ್ತಿದ್ದಾರೆಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದ್ದವು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜೇಠ್ಮಲಾನಿಯವರು, ಸರ್ಕಾರ ಅಥವಾ ಅರವಿಂದ ಕೇಜ್ರಿವಾಲ್ ಅವರು ನನಗೆ ನೀಡಬೇಕಿರುವ ಶುಲ್ಕವನ್ನು ಪಾವತಿ ಮಾಡದಿದ್ದರೂ ಪರವಾಗಿಲ್ಲ. ನಾನು ಕೇಜ್ರಿವಾಲ್ ಪರವಾಗಿ ಉಚಿತವಾಗಿಯೇ ಕೆಲಸ ಮಾಡುತ್ತೇನೆ. ಕೇಜ್ರಿವಾಲ್ ಅವರನ್ನು ನಾನು ಬಡ ಕಕ್ಷಿದಾರನಂತೆಯೇ ನೋಡುತ್ತಿದ್ದೇನೆ. ಹೀಗಾಗಿ ಕೇಜ್ರಿವಾಲ್ ಪರವಾಗಿ ನಾನು ಉಚಿತವಾಗಿ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ. 
ಶ್ರೀಮಂತರಿಗಷ್ಟೇ ನಾನು ಶುಲ್ಕವನ್ನು ವಿಧಿಸುತ್ತೇನೆ. ಬಡವರಿಗಾಗಿ ನಾನು ಉಚಿತವಾಗಿ ಕೆಲಸ ಮಾಡುತ್ತೇನೆ. ಪ್ರಸ್ತುತ ಉಂಟಾಗಿರುವ ಗೊಂದಲ ಹಾಗೂ ಸಮಸ್ಯೆಗಳು ಜೇಟ್ಲಿಯವರೇ ಸೃಷ್ಟಿಸಿದ್ದಾರೆ. ಜೇಟ್ಲಿಯವರು ನನ್ನ ಪಾಟಿವಾಲಿಗೆ (ಕ್ರಾಸ್ ಎಕ್ಸಾಮಿನೇಷನ್) ಹೆದರುತ್ತಿದ್ದಾರೆ. ಹೀಗಾಗಿಯೇ ಈ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಬಡವರಿಗಾಗಿ ನಾನು ಉಚಿತವಾಗಿ ಕೆಲಸವನ್ನು ಮಾಡುತ್ತೇನೆ. ನನ್ನ ಬಳಿ ಶೇ.99 ರಷ್ಟು ಬಡ ಕಕ್ಷಿದಾರರಿದ್ದಾರೆ. ದೆಹಲಿ ಸರ್ಕಾರ ನನಗೆ ಶುಲ್ಕ ಪಾವತಿ ಮಾಡದಿದ್ದರೂ ಪರವಾಗಿಲ್ಲ, ನಾನು ಉಚಿತಾಗಿಯೇ ಕೆಲಸ ಮಾಡುತ್ತೇನೆ. ಕೇಜ್ರಿವಾಲ್ ಅವರನ್ನು ನನ್ನ ಬಡ ಕಕ್ಷಿದಾರರಲ್ಲಿ ಒಬ್ಬರಂತೆ ನೋಡುತ್ತೇನೆಂದು ಹೇಳಿದ್ದಾರೆ. 
ನ್ಯಾಯಾಲಯದಲ್ಲಿ ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸಿದ್ದ ಜೇಠ್ಮಲಾನಿ 2016 ಡಿಸೆಂಬರ್‌ 1 ರಂದು, 1 ಕೋಟಿ ರೂ. ಬಿಲ್‌ ಕಳುಹಿಸಿದ್ದರು. ನಂತರ ಪ್ರತಿ ಬಾರಿ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದಕ್ಕೆ 22 ಲಕ್ಷ ರೂ. ಶುಲ್ಕ ವಿಧಿಸಿದ್ದಾರೆ. ಈವರೆಗೆ ಜೇಠ್ಮಲಾನಿ 11 ಬಾರಿ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದು, ಇದರ ಒಟ್ಟು ರೂ.3.42 ಕೋಟಿಯಾಗಿದೆ. 
ಜೇಠ್ಮಲಾನಿ ಅವರು ಕಳುಹಿಸಿದ್ದ ಬಿಲ್ ಮೊತ್ತವನ್ನು ಭರಿಸಲಾಗಿದೆ ಎಂದು ಕಡತದ ಮೇಲೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬರೆದಿದ್ದರು. ಈ ಬಿಲ್ ಗೆ ಅನುಮೋದನೆ ನೀಡಲಾಗದು, ಇದಕ್ಕೆ ಲೆಫ್ಟಿನೆಂಟ್ ಗವರ್ನರ್ ಸಮ್ಮತಿಸಬೇಕು ಎಂದು ಕಾನೂನು ಇಲಾಖೆ 2016 ಡಿ.7ರಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಸೋಡಿಯಾ ಅವರು, ಎಲ್ ಜಿ ಅನುಮತಿ ಬೇಡ, ಸಂಬಂಧಪಟ್ಟ ಇಲಾಖೆಯ ಅನುಮತಿ ಇದ್ದರೆ ಸಾಕು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com