
ನವದೆಹಲಿ: ಭಾರತೀಯ ಸೇನೆಯ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬಲ್ಲ ವೆಬ್ ಸೈಟ್ ರಚಿಸಬೇಕು ಎನ್ನುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಕನಸು ನನಸಾಗಿದ್ದು, ಭಾನುವಾರ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ "ಭಾರತ್ ಕೆ ವೀರ್" ಎಂಬ ಆ್ಯಪ್ ಮತ್ತು ವೆಬ್ ಸೈಟ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.
ಹುತಾತ್ಮ ಯೋಧರ ಕುಟುಂಬಗಳನ್ನು ಜನರು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವಂತಹ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ ಸೈಟ್ ಅನ್ನು ಆರಂಭಿಸುವಂತೆ ಅಕ್ಷಯ್ ಕುಮಾರ್ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು, ಅವರ ಸಲಹೆಗೆ ಕೇಂದ್ರ ಸರ್ಕಾರ ಅನುಮೋದನೆಯನ್ನೂ ನೀಡಿತ್ತು. ಬಳಿಕ ಕೇವಲ ಎರಡೂವರೆ ತಿಂಗಳಲ್ಲೇ ಕೇಂದ್ರ ಸರ್ಕಾರ ಈ ವೆಬ್ ಸೈಟ್ ಅನ್ನು ನಿರ್ಮಿಸಿದ್ದು, ಇದೀಗ ಈ ವೆಬೈ ಸೈಟ್ ಕಾರ್ಯ ಕಾರ್ಯರೂಪಕ್ಕೆ ಬಂದಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ಧನಸಹಾಯ ಸಂಗ್ರಹಿಸಬಲ್ಲ ಮತ್ತು ಹುತಾತ್ಮ ಯೋಧರ ಕುಟುಂಬಗಳ ವಿವರಗಳನ್ನೊಳಗೊಂಡ ವೆಬ್ ಸೈಟ್ ಮತ್ತು ಮೊಬೈಲ್ ಆ್ಯಪ್ ಅನ್ನು ಭಾನುವಾರ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಹಾಗೂ ನಟ ಅಕ್ಷಯ್ ಕುಮಾರ್ ಜಂಟಿಯಾಗಿ ಬಿಡುಗಡೆ ಮಾಡಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಅಕ್ಷಯ್ ಕುಮಾರ್, ಭಯೋತ್ಪಾದನೆ ಕುರಿತ ಚಿತ್ರವನ್ನು ನೋಡುತ್ತಿದ್ದಾಗ ತಮಗೆ ಇಂತಹುದೊಂದು ಆಲೋಚನೆ ಬಂದಿತ್ತು. ಉಗ್ರರಿಗೆ ಹಣ ಕ್ರೋಢೀಕರಿಸಲು ಉಗ್ರ ಸಂಘಟನೆಗಳು ವೆಬ್ ಸೈಟ್ ಗಳನ್ನು ಬಳಕೆ ಮಾಡುತ್ತಿರುವಾಗ ನಾವೇಕೆ ನಮ್ಮ ಯೋಧರ ಕುಟುಂಬಗಳಿಗೆ ನೆರವಾಗಬಲ್ಲ ವೆಬ್ ಸೈಟ್ ರಚಿಸಬಾರದು ಎಂದು ಕೊಂಡೆ. ಅದೇ ವಿಚಾರವನ್ನು ಕೇಂದ್ರ ಸರ್ಕಾರದೊಂದಿಗೂ ಹಂಚಿಕೊಂಡಿದ್ದೆ. ಅದಕ್ಕೆ ಮನ್ನಣೆ ನೀಡಿದ ಸರ್ಕಾರ ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ವೆಬ್ ಸೈಟ್ ಮತ್ತು ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಸರ್ಕಾರದ ಕಾಳಜಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಅಕ್ಷಯ್ ಕುಮಾರ್ ತಿಳಿಸಿದರು.
ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಬಯಸುವವರಿಗೆ ಈ ಅಪ್ಲಿಕೇಶನ್ ಸಹಕಾರಿಯಾಗಲಿದ್ದು, ಇದರ ಮೂಲಕ ಗರಿಷ್ಠ 15 ಲಕ್ಷ ರೂಪಾಯಿಗಳನ್ನು ಹುತಾತ್ಮರ ಕುಟುಂಬದವರ ಅಕೌಂಟ್ ನಂಬರ್ ಗೆ ವರ್ಗಾಯಿಸಬಹುದಾಗಿದೆ.
Advertisement