ಜೈಪುರ: ಬೇಸಿಗೆ ಬಿಸಿ ತಾರಕಕ್ಕೇರಿರುವಂತೆಯೇ ರಾಜಸ್ತಾನದ ಮೌಂಟ್ ಅಬು ಪರ್ವತಾರಣ್ಯದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ವಾಯುಸೇನೆಯ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಇಳಿದಿದೆ.
ಕಳೆದ ಮೂರು ದಿನಗಳ ಹಿಂದೆಯೇ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಭಾನುವಾರ ತೀವ್ರವಾಗಿ ಹರಡಿದೆ. ಸಮುದ್ರ ಮಟ್ಟದಿಂದ ಸುಮಾರು 1 722 ಮೀಟರ್ ಎತ್ತರದಲ್ಲಿರುವ ಅರಾವಳಿ ಪರ್ವತ ಶ್ರೇಣಿಗಳ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಸಮಯ ಕಳೆದಂತೆ ವ್ಯಾಪಕವಾಗಿ ಹರಡುತ್ತಿದೆ. ಕಾಡ್ಗಿಚ್ಚಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಪರ್ವತ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣಗಿ ನಿಂತಿದ್ದ ಬಿದಿರಿನ ಮರಗಳಿಂದಾಗಿ ಕಾಡ್ಗಿಚ್ಚು ತೀವ್ರಗೊಂಡಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಸ್ಥಳೀಯ ಗ್ರಾಮಸ್ಥರೇ ಜೇನುತುಪ್ಪಕ್ಕಾಗಿ ಬಿದಿರಿನ ಮರಕ್ಕೆ ಬೆಂಕಿ ಹಾಕಿರುವ ಸಾಧ್ಯತೆಗಳೂ ಕೂಡ ಇದೆ ಎಂದು ಹೇಳಲಾಗುತ್ತಿದೆ.
ದೇಶದ ಪ್ರಮುಖ ನೈಸರ್ಗಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮೌಂಟ್ ಅಬು ಪರ್ವತಾರಣ್ಯದಲ್ಲಿ ನಿಸರ್ಗದತ್ತೆ ಕೆರೆಗಳು, ಜಲಪಾತಗಳು. ಅಚ್ಚ ಹಸಿರಿನ ಅರಣ್ಯ ಪ್ರದೇಶ ಹಾಗೂ ಹಲವು ಧಾರ್ಮಿಕ ಕೇಂದ್ರಗಳ ಆಗರವಾಗಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಕಾಡ್ಗಿಚ್ಚಿನ ಪರಿಣಾಮ ಖ್ಯಾತ ನಕ್ಕಿ ಕೆರೆಯಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದ್ದು, ವಾಯುಸೇನೆಯ ಎಂಐ-17ವಿ5 ಸರಣಿಯ 2 ಹೆಲಿಕಾಪ್ಟರ್ ಗಳು ಕೆರೆಯಲ್ಲಿನ ನೀರನ್ನು ತೆಗೆದು ಅರಣ್ಯದ ಮೇಲೆ ಹಾಕುತ್ತಿದ್ದಾರೆ. ಈ ವರೆಗೂ ಸುಮಾರು 2.64 ಲೀಟರ್ ನೀರನ್ನು ಕಾಡ್ಗಿಚ್ಚು ನಂದಿಸಲು ಸುರಿದಿದ್ದು, ಬೆಂಕಿ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.
Advertisement