ನೀಮುಚ್: ಮದುವೆ ಸಮಾರಂಭದ ವೇಳೆ ಸಂಪ್ರದಾಯಗಳನ್ನು ಪೂರೈಸುತ್ತಿದ್ದ ಸಂದರ್ಭದಲ್ಲಿ ವರ ಆಕಸ್ಮಿಕವಾಗಿ ಕತ್ತಿಯಿಂದ ವಧುವಿನ ಕಡೆಯ 10 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಜಿಲ್ಲೆಯ ರಾಂಪೂರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಮದುವೆ ಮುಂದುವರೆಸಲು ವಧುವಿನ ಕುಟಂಬ ನಿರಾಕರಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ವರ ಕತ್ತಿಯಿಂದ ಒಂದು ಮರದ ಎಲೆಗಳನ್ನು ಕತ್ತರಿಸುವ ಸಂಪ್ರದಾಯ ಪೂರೈಸುತ್ತಿದ್ದ ವೇಳೆ ಕತ್ತಿ ಕೈಯಿಂದ ಜಾರಿ ಬಾಲಕನ ಮೇಲೆ ಬಿದ್ದಿದೆ ಎಂದು ರಾಂಪೂರ್ ಪೊಲೀಸ್ ಠಾಣೆಯ ಅಧಿಕಾರಿ ಅಮಿತ್ ಸರಸ್ವತ್ ಅವರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂಬಂಧ ವರನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಸಾರಸ್ವತ್ ಅವರು ಹೇಳಿದ್ದಾರೆ.