ಲಖನೌ: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿ ಅವರಿಗೆ ಮಂಗಳವಾರ ಪೊಸ್ಕೊ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪೊಸ್ಕೊ ಕೋರ್ಟ್ ನ ವಿಶೇಷ ನ್ಯಾಯಾಧೀಶ ಓಂ ಪ್ರಕಾಶ್ ಅವರು, ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಾದ ಪ್ರಜಾಪತಿ, ವಿಕಾಸ್ ವರ್ಮಾ ಮತ್ತು ಅಮರಿಂದರ್ ಸಿಂಗ್ ಅವರಿಗೆ ತಲಾ ಒಂದು ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಜಾಪತಿ ಹಾಗೂ ಇತರೆ ಆರು ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಿಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಪ್ರಜಾಪತಿ ಸುಮಾರು ಒಂದು ತಿಂಗಳ ನಂತರ ಮಾರ್ಚ್ 15ರಂದು ಬಂಧಿಸಿಲಾಗಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
49 ವರ್ಷ ಸಮಾಜವಾದಿ ಪಕ್ಷದ ನಾಯಕ ಪ್ರಜಾಪತಿ ಅವರು, 2014ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಅಪ್ರಾಪ್ತ ಮಗಳ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ.