ಲಕ್ನೋ: ಉತ್ತರ ಪ್ರದೇಶಧಲ್ಲಿರುವ ಪ್ರಸಿದ್ಧ ಹಿಂದೂ ಧಾರ್ಮಿಕ ಕೇಂದ್ರಗಳ ಸುತ್ತಲೂ ಗೋಡೆ ನಿರ್ಮಾಣ ಮತ್ತು ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅಯೋಧ್ಯೆಯಲ್ಲಿ ದಶಕಗಳಿಂದ ಆಚರಣೆಯಲ್ಲಿ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ವಿಶ್ವ ಪ್ರಸಿದ್ಧ ರಾಮಲೀಲಾ ಸಂಪ್ರದಾಯವನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ,
ಚಿತ್ರಕೂಟದಲ್ಲಿ ಭಜನ್ ಸಂಧ್ಯಾ ಮತ್ತು ಮಥುರಾದಲ್ಲಿ ರಾಸಲೀಲಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಿಎಂ ಯೋಜಿಸಿದ್ದಾರೆ.
ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಯೋಗಿ ಆದಿತ್ಯನಾಥ್, ಪ್ರಮುಖ ಹಿಂದೂ ಧಾರ್ಮಿಕ ಸ್ಥಳಗಳ ಸುರಕ್ಷತೆಗಾಗಿ ಕಂಪೌಂಡ್ ಗೋಡೆ ನಿರ್ಮಾಣ, ಬರುವ ಭಕ್ತರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ವಿಶ್ರಾಂತಿ ಗೃಹ, ಶೌಚಾಲಯ ನಿರ್ಮಿಸಿ ಅನುಕೂಲ ಸಲ್ಪಿಸುವಂತೆ ಸೂಚಿಸಿದ್ದಾರೆ.
2018ರ ಜೂನ್ ವೇಳೆಗೆ 14.77 ಕೋಟಿ ರೂ ವೆಚ್ಚದಲ್ಲಿ ಅಯೋಧ್ಯೆಯಲ್ಲಿ ಭಜನ್ ಸಂಧ್ಯಾ ಭವನ ನಿರ್ಮಾಣ ಮಾಡುವಂತೆ ತಿಳಿಸಿದ್ದಾರೆ, ಭವನ ಉತ್ತಮ ಗುಣಮಟ್ಟದ್ದಾಗಿರಬೇಕು ಎಂದು ಅವರು ಹೇಳಿದ್ದಾರೆ.
ಜೊತೆಗೆ ಚಿತ್ರಕೂಟದಲ್ಲಿ 13.75 ಕೋಟಿ ರು ವೆಚ್ಚದ ಭಜನ್ ಸಂದ್ಯಾ ಮತ್ತು ಪರಿಕ್ರಮ ಗಳನ್ನು ನಿರ್ಮಿಸಲು ಆದೇಶಿಸಿದ್ದಾರೆ. ಜೊತೆಗೆ ಪಟ್ಟಣದಲ್ಲಿರುವ ಕೆರೆಗಳ ಸೌಂದರ್ಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.