ಪಲ್ವಾಲ್: ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ಮಧುಮಗ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ವಧುವಿನ ಕುಟುಂಬಸ್ಥರು ಕೂಡಿಹಾಕಿದ್ದ ಘಟನೆ ಹರ್ಯಾಣದ ಹಥಣಿ ಗ್ರಾಮದಲ್ಲಿ ನಡೆದಿದೆ.
ಫರೀದ್ ಖುರೇಶಿ ಕುಟುಂಬ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು. ಹೀಗಾಗಿ ವಧುವಿನ ಕುಟುಂಬಸ್ಥರು ನಾಲ್ಕು ಮಂದಿಯನ್ನು ರೂಮಿನ ಒಳಗಡೆ ಕೂಡಿ ಹಾಕಿ ನಂತರ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ಪಂಚಾಯಿತಿ ಸಭೆ ಸೇರಿದ್ದು, ಮಧುಮಗಳ ಹೆಸರಿಗೆ ನಾಲ್ಕು ಎಕರೆ ಜಮೀನನ್ನು ವರ್ಗಾಯಿಸುವಂತೆ ಮಧುಮಗನ ಕುಟುಂಬಕ್ಕೆ ಪಂಚಾಯಿತಿ ತಾಕೀತು ಮಾಡಿದೆ. ಇಲ್ಲದಿದ್ದರೇ ಮದುಮಗಳನ್ನು ಕುರೇಷಿಯ ಮನೆಗೆ ಹೋಗಲು ಅವಕಾಶ ನೀಡುವುದಿಲ್ಲವೆಂದು ಅದು ಸ್ಪಷ್ಟ ಪಡಿಸಿದೆ.
ಭಾನುವಾರ ಸರ್ಕಾರಿ ರಜೆಯಿದ್ದ ಕಾರಣ ಜಾಗವನ್ನು ಹೆಸರಿಗೆ ವರ್ಗಾವಣೆಯಾಗುವವರೆಗೆ ಭದ್ರತೆಗಾಗಿ 10 ಲಕ್ಷ ರು ಗಳನ್ನು ಪಂಚಾಯಿತಿಯಲ್ಲಿ ಠೇವಣಿ ಇಡುವಂತೆ ಕುರೇಶಿ ಕುಟುಂಬಸ್ಥರಿಗೆ ಆದೇಶ ನೀಡಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.